Friday, March 26, 2010

ಅವನಿಗೊಂದು ಪತ್ರ ( ಪ್ಲೀಸ್ ನೀವೇ ಹೇಳಿ ನಾನು ಏನು ಮಾಡಬೇಕೆಂದು )

ಯಾಕೆ ನೀನು ಮತ್ತೆ ನನ್ನ ವರ್ತಮಾನಕ್ಕೆ ಬಂದಿದಿಯ ? ಜೀವನದಲ್ಲಿ ಬಂದಿದ್ದು ಅನುಭವಿಸಬೇಕು , ಇಲ್ಲೇ ಇದ್ದು ಜಯಿಸಬೇಕು ಅಂತ ಮನಸನ್ನ ಗಟ್ಟಿ ಮಾಡಿಕೊಂಡು ಈ ಜೀವನದ ಜೊತೆ compromise ಮಾಡ್ಕೊಂಡು ಬದುಕುತ್ತ ಇದ್ದೆ . ಆದ್ರೆ ನೀನ್ಯಾಕೆ ಮತ್ತೆ ಬಂದು ನನ್ನ ತಿಳಿಯಾದ ಮನಸ್ಸಿನಲ್ಲಿ ಕಲ್ಲು ಎಸೆಯುತ್ತ ಇದಿಯಾ ? ಯಾಕೆ ಮತ್ತೆ ನನ್ನ ಜೀವನದಲ್ಲಿ ಬಂದು ಕಾಡ್ತಾ ಇದ್ದೀಯ? ನಿನ್ನನ್ನ ನಾನು ಕಾಯಾ , ವಾಚಾ , ಮನಸಾ ಪ್ರೀತಿಸಿದ್ದೆ . ನೀನಗೊಸ್ಕರ್ ಹೆತ್ತ ಅಪ್ಪ ಅಮ್ಮನೇ ದೂರು ಮಾಡ್ಕೊಳಕ್ಕೆ ತಯಾರಿದ್ದೆ . ನೀನಗೊಸ್ಕರ್ ಈ ಸಮಾಜನ ಎದಿರಿಸಿ ನಿಲ್ಲೋ ದಿಟ್ಟ ದೈರ್ಯನು ನನ್ನಲ್ಲಿ ಇತ್ತು . ಆದ್ರೆ ನೀನು ಏನು ಮಾಡಿದೆ ? ಈ ಸಮಾಜಕ್ಕೆ , ನಿಮ್ಮ ಮನೆಯವರ ಗೌರವಕ್ಕೆ ನಮ್ಮ ಪ್ರೀತಿನ ಬಲಿ ಕೊಟ್ಟೆ . ನಿಂಗೆ ಬರಿ ನಾನು ಹಿಂದೂ ನೀನು ಮುಸ್ಲಿಂ ಅನ್ನೋ ಆತಂಕದ ಮುಂದೆ ನಮ್ಮ ಪ್ರೀತಿನ ಮಣ್ಣು ಮಾಡಿ ಬಿಟ್ಟಿದ್ದಿಯಲ್ಲ . ಊರೆಲ್ಲ , ನನ್ನ ಗೆಳತಿಯರೆಲ್ಲ ಅಸೂಯೆ ಪಡುವಸ್ಟು ನನ್ನ ಪ್ರಿತಿಸುತ್ತಿದ್ದಾಗ ನಿಂಗೆ ಗೊತ್ತಿರಲಿಲ್ವಾ ನಾನು ಒಬ್ಬ ಹಿಂದೂ ಹುಡುಗಿ ಅಂತ . ಹರೆಯದ ಭರದಲ್ಲಿ , ಯವ್ವನದ ಹುಚ್ಚಿನಲ್ಲಿ ಈ ಸಮಾಜದ ನೀತಿ ನಿಯಮಗಳು ನಿಂಗೆ ಕಾಣಿಸಲಿಲ್ಲ ಅಲ್ಲಾ? ನನ್ನ ಜೀವನ ಪರ್ಯಂತ್ ಹೀಗೆ ಪ್ರಿತಿಸಬೇಕಾದ್ರೆ ನೀನು ಈ ಸಮಾಜನ ಎದುರಿಸಿ ನಿಲ್ಲಬೇಕಾಗುತ್ತೆ ಅನ್ನೋ ಸತ್ಯ ನಿಂಗೆ ತಿಳಿದಿರಲಿಲ್ವಾ ? ಮನೆಯಲ್ಲಿ ಈ ವಿಷಯ ಗೊತ್ತಾಗಿ ನಾನು ಇನ್ನು ೧೮ ತುಂಬುವದರೊಳಗೆ ನನಗೆ ಮದುವೆ ಮಾಡೋಕೆ ಗೊತ್ತು ಮಾಡಿದ ಮೇಲೆ ಬಂದು " ಇವಳು ನನ್ನ ಪ್ರೀತಿ , ನನ್ನ ಜೀವ , ಇವಳಿಲ್ದೆ ನಾನು ಬದುಕಿರಲಾರೆ , ಪ್ಲೀಸ್ ನನ್ನ ಪ್ರೀತಿನ ನಂಗೆ ಕೊಟ್ಬಿಡಿ " ಅಂತ ನಮ್ಮ ಅಪ್ಪ ಅಮ್ಮನ ಕಾಲು ಹಿಡ್ಕೊತಿಯಾ ಅಂದ್ಕೊಂಡಿದ್ದೆ , ನೀನು ಅದು ಮಾಡಲಿಲ್ಲ . ಆದ್ರೆ ನಾನು ಸೋಲಲಿಲ್ಲ ಮನೆಯವರ ಜೊತೆ ಜಗಳ ಮಾಡಿದೆ , ಊಟ ಬಿಟ್ಟೆ ಒಂದಿನ ಮನೇನು ಬಿಟ್ಟು ನಿನ್ನ ಹತ್ರ ಬಂದು ತಬ್ಬಿಕೊಂಡು ಅತ್ತಾಗ್ ನೀನು ನಂಗೆ "ಈ ಸಮಾಜಕ್ಕೆ ಸೋತು ಬಿಡು , ನಮ್ಮ ಪ್ರೀತಿ ಯಾವಾಗಲು ಒಂದಾಗೋಲ್ಲ " ಅಂತ ಉಪದೇಶ ಬೇರೆ ಮಾಡಿ ವಾಪಸ್ಸು ಕಳಿಸಿ ಬಿಟ್ಟಿದ್ದೆ .ನಂಗೊತ್ತಿತ್ತು ಉಪಜೀವನಕ್ಕೆ ನೀನು ಇನ್ನು ಹೆಣಗತಾಇರೋ ಸಮಯ ಅದು . ನೀನು ನಿನ್ನ ಸ್ವಂತ್ ಪ್ರತಿಭೆಯಿಂದ , ಯಾರ್ ಮುಂದೆ ಕೈ ಚಾಚದೆ ನಿನ್ನದೇ ಒಂದು ಬಿಸಿನೆಸ್ ಅಂತ ಅವಾಗ್ ಸ್ಟಾರ್ಟ್ ಮಾಡ್ಕೊಂಡಿದ್ದೆ . ಅದರಲ್ಲಿ ನೀನು ಎಡುವುತ್ತ ಬಿಳುತ್ತ ಏಳುತ್ತಾ ಇರೋ ದಿನಗಳು ಅವು . ಆದ್ರೆ ನಾನು ನಿಂಗೆ ಹೇಳಿರಲಿಲ್ಲವ " ರಫೀಕ್ ನಂಗೆ ಆಸ್ತಿ ಪಾಸ್ತಿ ಏನು ಬೇಡ ಬರಿ ಎರಡ ಹೊತ್ತು ಊಟ ಹಾಕಿ ಪ್ರೀತಿಯಿಂದ ನನ್ನ ನೋಡ್ಕೋ ,ಆ ಶಕ್ತಿ ಈಗ ನಿಂಗೆ ಇದೆ , ಪ್ಲೀಸ್ ನನ್ನ ವಾಪಸ್ ಕಳಿಸಬೇಡ " ಅಂತ . ಆದ್ರೆ ನೀನು ನನ್ನ ಮುಖಾನು ನೋಡದೆ " ಪ್ಲೀಸ್ ಹೊರಟು ಹೋಗು " ಅಂತ ಹೇಳಿ ಮತ್ತೆ ಯಾಕೆ ಬಂದೆ ಈಗ . t
ಅದು ನಾನೋಬ್ಬರ್ ಹೆಂಡತಿ ಹಾಗೂ ೨ ಮಕ್ಕಳ ತಾಯಿ ಆದ್ಮೇಲೆ ಬಂದು ನನ್ನ ಜೀವನದಲ್ಲಿ ಮತ್ತೆ ಬಿರುಗಾಳಿ ಎಬ್ಬಿಸಿದಿಯಲ್ಲ . ಈವಾಗ್ ಎಲ್ಲಿಂದ ಬಂತು ನಿಂಗೆ ದೈರ್ಯ ? ಈ ದೈರ್ಯ ಆವಾಗ್ ಇದ್ದಿದ್ದರೆ ಪ್ರತಿದಿನವೂ ಸಾಯುತ್ತ ನಾ ಬದುಕುತ್ತಿರಲಿಲ್ಲ . ನಿಂಗೊತ್ತಾ ವಾಪಸು ಹೋದಮೇಲೆ ಮನೇಲಿ ಅಪ್ಪ ಅಮ್ಮಂಗೆನನ್ನ ಯಾರಿಗಾದರು ಗಂಟು ಹಾಕಿ ಬಿಡೋಣ ಅನ್ನೋ ಅತುರ್ ಜಾಸ್ತಿ ಆಯಿತು . ಅವ್ರಿಗೆ ನಾನು ಮನೆ ಬಿಟ್ಟು ಹೋದ ವಿಷಯ ಊರೆಲ್ಲ ಗೊತ್ತಾಗೋ ,ಮುಂಚೆನೆ ನನ್ನ ಕುತ್ತಿಗೆಗೆ ಮೂರು ಗಂಟು ಹಾಕಬೇಕು ಅನ್ನೋ ತರಾತುರಿ. ಆವಾಗ ಬಂದಿದ್ದೆ ಈ ಸಂಬಧ . ಮಾವ ಚೆನ್ನಾಗಿ ಆಸ್ತಿ ಮಾಡಿ ಬಿಟ್ಟು ಹೋಗಿದ್ದಾರೆ , ಆದ್ರೆ ಆ ಆಸ್ತಿನ ಉಳಿಸ್ಕೋ ಬೇಕು ಮತ್ತು ಬೆಳಿಸ್ಕೋ ಬೇಕು ಅನ್ನೋ ಛಲ ಇಲ್ಲದ ಇಬ್ಬರು ಗಂಡು ಮಕ್ಕಳನ್ನು ಬಿಟ್ಟು ಹೋಗಿದ್ದಾರೆ . ಆ ಎರಡು ಗಂಡು ಮಕ್ಕಳಲ್ಲಿ , ಚಿಕ್ಕ ಮಗನಿಗೆ ನನ್ನ ಗಂಟು ಹಾಕಿದರು . ಕೆಲಸಕ್ಕೆ ಬಾರದೆ ಬರಿ ಕೂತು ತಿನ್ನೋವರು ಅಂತ ಅವರಿಗೆ ಯಾರು ಹೆಣ್ಣು ಕೊಟ್ಟಿರಲಿಲ್ಲ , ಮನೆ ಬಿಟ್ಟು ಓಡಿ ಹೋಗಿ ವಾಪಸು ಬಂದಿರೋ ನಂಗೆ ಗಂಡು ಸಿಗೋಲ್ಲ ಅಂತ ನನ್ನ ಅವರಿಗೆ ಮದುವೆ ಮಾಡಿಸಿದರು . ನನಗೆ ನನ್ನ ಗಂಡ ಅಂದ್ರೆ ಹಾಗಿರಬೇಕು , ಹೀಗೆರ್ಬೇಕು , ಅವನು ಸ್ವಂತ್ ಕಾಲಿಂದ ಮೇಲೆ ಬರಬೇಕು , ಚುರುಕಾಗಿರಬೇಕು , ಆಕರ್ಷಣಿಯ ವ್ಯಕ್ತಿತ್ವ ಇರ್ಬೇಕು , ಒಳ್ಳೆ ನಡೆ ನುಡಿ , ಯಾವಾಗಲು ನಗು ನಗುತ್ತ ಮಾತನಾಡುವ ಜೊತೆ ಜೊತೆಗೆ ಜೀವನವನ್ನ ಸವಾಲಾಗಿ ಸ್ವೀಕರಿಸಿ ಏನಾದ್ರು ಸಾಧಿಸಬೇಕು , ಮೇಲಾಗಿ ಏನೆ ಕಷ್ಟ ಬಂದ್ರು ನನ್ನ ಹಾಗೋ ನನ್ನ ಮಕ್ಕಳನ್ನ ಸಾಕೋ ಕ್ಯಾಪಸಿಟಿ ಇರ್ಬೇಕು , ಒಂದರ್ಥದಲ್ಲಿ ನಿನ್ನ ಥರ ಇರ್ಬೇಕು ಅಂತ ಕನಸು ಕಂಡಿದ್ದು ನುಚ್ಚು ನೂರಗಲಿಕ್ಕೆ ನನ್ನ ಮದುವೆ ಸಾಕಾಗಿತ್ತು . ಬಹುತೆಕ್ ಈವೆಲ್ಲ ಗುಣ ಇವರಲ್ಲಿ ಇದ್ದಿದ್ರೆ ನಿನ್ನ ಮರಿತಿದ್ದೆ ಅನ್ನಿಸುತ್ತೆ , ಎಲ್ಲ ಬೇಡ ಅದರಲ್ಲಿ ಸ್ವಲ್ಪ ಗುಣನಾದ್ರೂ ಇದ್ರು ನೀನು ನನ್ನ ಜೀವದಲ್ಲಿ ಇದ್ದೆ ಅನ್ನೋದನ್ನೇ ಬೇರು ಸಹಿತ ಕಿತ್ತೊಗೆಯುತ್ತಿದ್ದೆ ಅನ್ನಿಸುತ್ತೆ . ಆದ್ರೆ ಇದಕ್ಕೆಲ್ಲ ತದ್ವಿರೋಧವಾಗಿರೋ ಇವರ ಜೊತೆ ಜೀವನ ಮಾಡುವಾಗ್ ನಿನ್ನ ನೆನಪೇ ಒಂದು ಮನಸಿಗೆ ತಂಪು ಕೊಡುವ ಸಂಗತಿ ಆಗಿತ್ತು . ದಿನ ಬೆಳಿಗೆದ್ದರೆ ಒಂದು ೧೦ ರೂಪಾಯಿಗೂ ಅತ್ತೆ ಮುಂದೆ ಕೈ ಚಾಚೋ ಇವರನ್ನ ನೋಡಿ ಮನಸ್ಸು ಹೆಸಿತ್ತು . ಇವರಾ ನನ್ನ ಗಂಡ ಅನ್ನೋ ನೋವು ತಡಿಯೋಕೆ ಆಗದೆ ಹೃದಯ ಘಾಸಿಗೊಂಡಿದೆ .
ಹೀಗೆ ಇದೆ ನನ್ನ ಜೀವನ , ಇದೆ ನನ್ನ ವಾಸ್ತವ್ ಅಂತ ಕಷ್ಟ ಪಟ್ಟು ಮನಸ್ಸಿಗೆ ತಿಳಿ ಹೇಳಿ ಬದುಕಿಗೆ ಹೊಂದು ಕೊಂಡು ಹೋಗುತ್ತಿರುವಾಗ್ , ನೀನು ಮತ್ತೆ ಬಂದಿದಿಯ .ಈವಾಗ್ ನೀನು ಒಬ್ಬ ಜವಾಬ್ದಾರಿ ಇರೋ ಗಂಡ . ನಿನ್ನನ್ನೇ ನಂಬಿಕೊಂಡು ಇರೋ ನಿನ್ನ ಹೆಂಡತಿ , ಅಪ್ಪ , ಅಮ್ಮ . ಅದರಲ್ಲಿ ನಾನ್ ಯಾಕೆ ನಿಂಗೆ ಮತ್ತೆ ನೆನಪಾದೆ ? ನಿನ್ನ ಅರ್ಥ ಮಾಡಿಕೊಳ್ಳೋಕೆ ನನ್ನ ಬಿಟ್ಟು ಯಾರಿಗೂ ಸಾದ್ಯ ಇಲ್ಲ ಅಂತ ನಿಂಗೆ ಜೀವನದ ಈ ಮದ್ಯ ವಯಸ್ಸಿನಲ್ಲಿ ಅರ್ಥ ಆಯಿತೆ ?
ಮೊನ್ನೆ ಹುಬ್ಬಳಿ ಬಸ್ ಸ್ಟ್ಯಾಂಡ್ ಮೇಲೆ ನಮ್ಮಿಬ್ಬರ ಆಕಸ್ಮಿಕ್ ಭೆಟ್ಟಿ ಆದ್ಮೇಲೆ , ನಿಂಗೆ ನಾನು ಫೋನ್ ನಂಬರ್ ಕೊಟ್ಟಿದ್ದೆ ತಪ್ಪಾಗಿ ಹೋಯ್ತು ಅನ್ನಿಸ್ತ ಇದೆ . ಆಮೇಲೆ ನಿನ್ನ ಕಾಲ್ , ಅದು ಇದು ಮಾತಾಡುತ್ತ ಮತ್ತೆ ನಂಗೆ ನನ್ನ ಮನಸಿನ ಮೇಲಿನ ಹಿಡಿತ ತಪ್ಪಿ ಹೋಯ್ತು . ಮನೇಲಿ ಯಾರು ಇಲ್ಲ ಅಂದ್ರೆ ಬುದ್ದಿ ಬೇಡ ಅಂದ್ರುಮನಸ್ಸಿನ ಮಾತು ಕೇಳಿ ನಿಂಗೆ ಮಿಸ್ ಕಾಲ್ ಕೊಟ್ಟೆ ಬಿಡ್ತೀನಿ . ದಿನಕ್ಕೆ ಒಂದು ಸಲ ಆದರು ನಿನ್ನ ದ್ವನಿ ಕೇಳಬೇಕು . ಇಲ್ಲ ಅಂದ್ರೆ ಏನೋ ಕಳ್ಕೊಂಡ್ ಹಾಗೆ ಅನುಭವ .
ಮಾತಾಡಿದ ಮೇಲೆ ಯಾಕೋ ಒಂದು ಥರ guilt ಫೀಲ್ ಆಗುತ್ತೆ ಕಣೋ . ನಾಳೆ ಇಂದ ನಿನ್ನ ಫೋನ್ receive ಮಾಡಬಾರದು ಅಂದ್ಕೋತೀನಿ , ಆದ್ರೆ ಮರುದಿನ ನಾನೇ ನನ್ನ ಕಂಟ್ರೋಲ್ ಇಲ್ಲದೆ ನಿಂಗೆ ಮಿಸ್ ಕಾಲ್ ಕೊಡ್ತೀನಿ . ಇದೆಲ್ಲ ತಪ್ಪು ಅಂತ ಬುದ್ದಿ ವಾದ ಮಾಡ್ತಾ ಇದ್ದರೆ , ಮನಸ್ಸು ಮಾತ್ರ ನಿನ್ನ ಹತ್ರ ವಾಲುತ್ತ ಇದೆ . ಇದಕ್ಕೆ ಪೂರಕ್ ಎನ್ನುವಂತೆ ನೀನು ಸಹ ಈ ರೀತಿ ಮಾತಾಡೋಕೆ ಪ್ರೋತ್ಸಾಹ ಕೊಡ್ತಾ ಇದ್ದೀಯ . ಮೊದಲು ಸಮಾಜಕ್ಕೆ ಸೋತು ಬೀಡು ಅಂತ ನಂಗೆ ಹೇಳಿದವನು , ಈವಾಗ ಯಾಕೆ ನೀನು ನಿನ್ನ ಮನಸ್ಸಿಗೆ ಮತ್ತೆ ಸೋಲ್ತಾ ಇದ್ದೀಯ . ನೀನಾದ್ರು ನಿನ್ನ ಮನಸ್ಸನ ಹತೋಟಿಯಲ್ಲಿ ಇಟ್ಕೊಂಡು ನಂಗೆ ಮತ್ತೆ ಆ ಥರ ಉಪದೆಶ್ ಮಾಡ್ಬಾರ್ದಾ?
ನಿನ್ನ ಮುಖ ನೋಡಿದ ದಿನ ಅಂತು ನಂಗೆ ಹಬ್ಬ . ಪೂರ್ತಿ ದಿನ ಕಣ್ಣು ಮುಚ್ಚಿ ನಿನ್ನ ಮುಖ , ನಿನ್ನ ಶರ್ಟ್ , ನೀ ಕೊಟ್ಟ ಮುಗುಳ ನಗೆ , ನೀ ನಡೆದ ಭಂಗಿಗಳನ್ನ ರೀಪ್ಲೆ ಮಾಡಿ ಅದೆಷ್ಟು ಉತ್ಸಾಹದಿಂದ ಇರ್ತೀನಿ . ಇತ್ತೀಚಿಗೆ ಅಂತು ಮತ್ತೆ ೧೮ ವಯಸ್ಸಿನ ಹುಡುಗಿ ಥರ ಬರಿ ಅನ್ಯಮನಸ್ಕಳಾಗಿ , ನಿನ್ನ ಗುಂಗಿನಲ್ಲೇ ಇರ್ತೀನಿ . ಇತ್ತೀಚಿನ ಸಿನಿಮಾ ಪ್ರೆಮಗಿತೆಗಳನ್ನ ಕೇಳಿದ್ರೆ ಮತ್ತೆ ಆ ಹದಿ ಹರೆಯ ವಾಪಸ್ಸು ಬಂದ್ ಅನುಭವ .

ಇವೆಲ್ಲಗಳನ್ನು ಸಂಪೂರ್ಣವಾಗಿಯೂ ನಾನು ಆನಂದಿಸಲು ನನ್ನ ಕೈಲಿ ಆಗ್ತಾ ಇಲ್ಲ . ಯಾಕೆಂದರೆ ನನ್ನ ಗಂಡ ಕೈಲಾಗದವನು , ಸೋಮಾರಿ , ಎಲ್ಲದಕ್ಕೂ ಅವರ ಅಮ್ಮನ ಮುಂದೆ ನಿಂತು ಕೈ ಚಾಚೋವನು ಮಾತ್ರ , ಆದ್ರೆ ಕೆಟ್ಟವನಲ್ಲ ಅಂತ ನನ್ನ ಬುದ್ದಿ ನಂಗೆ ಹೇಳಿದ್ರು , ಮನಸ್ಸು ಮಾತ್ರ ಈ ನನ್ನ ಪ್ರೀತಿ ಮಾತ್ರ ನಿಂಗೆ ಅಂತ ಹೇಳಿ ನನ್ನನ್ನ ಇನ್ನು weak ಮಾಡ್ತಾ ಇದೆ .
ಇನ್ನೊಂದು ಸಲ ಇದೆ ಬುದ್ದಿ ನಂಗೆ " ಜೀವನ ಇರೋದು ಒಂದೇ ಸಲ , ಅದನ್ನ compromise ಮಾಡ್ಕೋಬೇಡ . ಸಮಾಜಕ್ಕೆ ಹೆದರಿ ನಿನ್ನ ಪ್ರೀತಿನ ಮತ್ತೆ ಬಲಿ ಕೊಡಬೇಡ , ಈ ರೀತಿ ನೀತಿ morals ಎಲ್ಲ ನಾವು ನಮಗೆ ಅನೂಕುಲಕ್ಕೆ ತಕ್ಕಂತೆ ಕಟ್ಟಿರುವುದು . ಇಲ್ಲಿವರೆಗೂ ಪ್ರತಿದಿನ ಸತ್ತು ಬದುಕಿದೆ . ಅದು ಒಂದು ಜೀವನಾನಾ ? ಇವಾಗ್ ನೀನು ಅವನ್ನ ಪ್ರೀತಿಸ್ತ ಇದ್ದೀಯ ಅಸ್ಟೇ. ನೀನು ಯಾರಿಗೂ ಮೋಸ ಮಾಡ್ತಾ ಇಲ್ಲ . ನಿಂಗೆ ಅವನ್ ಜೊತೆ ಮಾತಾಡಿದ್ರೆ ಸಂತೋಷ್ ಸಿಗೋ ಹಾಗಿದ್ರೆ ಮಾತಾಡು . ಮತ್ತೆ ಎಲ್ಲರ ಬಗ್ಗೆ ಯೋಚಿಸಿ ನಿಂಗೆ ನೀನೆ ಅನ್ಯಾಯಾ ಮಾಡ್ಕೋಬೇಡ . ಆಫ್ಟರ್ ಆಲ್ ನಿಂಗು ಸಂತೋಷ್ವಾಗಿರೋಕೆ ಹಕ್ಕು ಇದೆ " ಅಂತ ಕಿವಿಯೊಳಗೆ ಪ್ರತಿದ್ವನಿಸುತ್ತೆ .
ನಾನು ಏನು ಮಾಡಲಿ ನೀನೆ ಹೇಳೋ ...
ಇದನ್ನು ಓದೋ ನೀವೆಲ್ಲರೂ ಹೇಳಿ ನಾನು ಏನು ಮಾಡ್ಬೇಕು ?

( ಇದು ಸತ್ಯಘಟನೆ ಆದಾರಿತ ಕಥೆ, ನನ್ನ ಗೆಳತಿಯ ಜೀವನದಲ್ಲಿ ಬಂದು ನಿಂತಿರೋ ಘಟ್ಟ . ಅವಳು ಮಾಡುತ್ತಿರುವದು ತಪ್ಪು ಅಂತ ಅವಳಿಗೂ ಗೊತ್ತು . ಆದ್ರೆ ಇದರಿಂದ ಅವಳು ಹೊರ ಬರಲಿಕ್ಕೆ ಆಗ್ತಾ ಇಲ್ಲ , ಅವಳು ತೀವ್ರ depression ಗೆ ಒಳಗಾಗಿದ್ದಾಳೆ .
. ಇದಕ್ಕೆ ಪ್ರಸಾದ್ ( ನನ್ನ ಪತಿ ) ಎಲ್ಲಾದರು ಒಳ್ಳೆ ಕಡೆ ಅವಳಿಗೆ ಕೌನ್ಸೆಲ್ಲಿಂಗ್ ಅರೆಂಜ್ ಮಾಡೋಣ ಅಂತ ಇದ್ದಾರೆ .
ಅನುಭವಿಗಳು ಇರೋ ಈ ಬ್ಲಾಗ್ ಲೋಕದಲ್ಲಿ ಇದನ್ನ ಬರಿದ್ರೆ ನಿಮ್ಮ ಅಂತವರ ಅಭಿಪ್ರಾಯ ತಿಳಿದರೆ ಅವಳು ಏನು ಮಾಡ್ಬೇಕು ಅಂತ ಒಂದು ದಾರಿ ಸಿಗಬಹುದೇನೋ ಅಂತ ಆಶೆ ಇಂದ , ಅವಳ ಒಪ್ಪಿಗೆ ಮೇರೆಗೆ ಅವಳ ಮನಸ್ಸಿನ ಭಾವನೆಗಳನ್ನ ನನ್ನ ಪೆನ್ನಿನ ಮೂಲಕ ಈ ಪತ್ರದಲ್ಲಿ ಇಡ್ತಾ ಇದ್ದೀನಿ . ಪ್ಲೀಸ್ ನಿಮ್ಮ ಪ್ರಕಾರ ಅವಳು ಏನ್ ಮಾಡ್ಬೇಕು ಹೇಳಿ )

40 comments:

  1. ಮನಸಾರೆ....
    ನನ್ನ ಪ್ರಕಾರ... ಆಕೆ ಡಿಪ್ರೆಶನ್ ಗೆ ಒಳಗಾಗಿದ್ದಾಳಾದರೆ ಆಕೆಗೆ ಮನೋವೈದ್ಯರಸಹಾಯ ಬೇಕೇ ಬೇಕು... ಅದು ಯಾವ ಮಟ್ಟದ್ದೆ೦ದು ಅದಕ್ಕೆ ಯಾವ ಚಿಕಿತ್ಸೆ ನೀಡಬೇಕೆ೦ಬುದನ್ನು ಅವರೇ ನಿರ್ಧರಿಸಬೇಕಾಗುತ್ತೆ..

    ಆಕೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗದ ಸ್ಥಿತಿಯಲ್ಲಿದ್ದಾಳೆ೦ದರೆ ಅದು ಬೇರೆ ಅವಘಡಗಳಿಗೆ ಕಾರಣವೂ ಆಗಬಹುದು...
    ಪರಿಸ್ತಿತಿಗೆ ಹೊ೦ದಿಕೊಳ್ಳಲಾರದ.. ಅಥವಾ ಇರುವ ಪರಿಸ್ತಿತಿಯನ್ನು ಒಪ್ಪಿಕೊಳ್ಳಲಾರದ ಸ್ಥಿತಿಯಲ್ಲಿ ಆಕೆ ಇದ್ದಾಳೆ... ಅನ್ನಿಸುತ್ತಿದೆ..
    ಅಸಮರ್ಪಕ ಹಾರ್ಮೋನುಗಳ ಸ್ರಾವದಿ೦ದ ಈ ಸಮಸ್ಯೆಗಳು ಹುಟ್ಟುತ್ತವೆ..
    ಈ ಸ್ಥಿತಿಯಲ್ಲಿ ಸೈಕಿಯಾಟ್ರಿಸ್ಟ್..ಮತ್ತು ಸೈಕೊಲೊಜಿಸ್ಟ್ ಇಬ್ಬರ ಸಹಾಯವೂ ಆಕೆಗೆ ಬೇಕಾಗಬಹುದು..ತಡಮಾಡುವುದು ಬೇಡ ಎನ್ನುವುದು ನನ್ನ ಸಲಹೆ...
    ಆಲ್ ದ ಬೆಸ್ಟ್...

    ReplyDelete
  2. ನನಗನ್ನಿಸುತ್ತದೆ ಚ೦ಚಲ ಮನದ, ಗಟ್ಟಿ ನಿರ್ಧಾರವಿರದ, ರಫ಼ೀಕನ೦ತಾ ಸ೦ಪಾದಿಸೊ ಅಪಾರ ಪ್ರೀತಿಯ ಗ೦ಡಿಗಿ೦ತಾ ಅವಳ ಇಗೀನ ಉ೦ಡಾಗು೦ಡಿ ಪತಿಯೇ ವಾಸಿ. ಹೆಣ್ಣು ಮನಸ್ಸು ಮಾಡಿದಲ್ಲಿ ಏನೆಲ್ಲಾ ಸಾಧಿಸಬಹುದು -ಉ೦ಡಾಗು೦ಡಿ ಗ೦ಡನನ್ನು ಬದಲಾವಣೆ ತರೋ ನಿಟ್ಟಿನಲ್ಲಿ ಅವಳ ಪ್ರೀತಿಭರಿತ ಪ್ರಯತ್ನ ಕಾರ್ಯಸಾಧನೆ ಮಾಡೆ ಮಾಡುತ್ತೆ. ಮು೦ದೆ ಹೆಜ್ಜೆ ಇಟ್ಟು ಮಕ್ಕಳಾದ ಮೇಲೂ ಮತ್ತೆ ಹಿ೦ದಿನ ಹಾದಿ ನೋಡುವದು ತಪ್ಪು- ನನ್ನ ಅಭಿಪ್ರಾಯದಲ್ಲಿ. ಮಕ್ಕಳ ಭವಿಷ್ಯವನ್ನು ನೋಡಬೇಕಲ್ಲವೆ!. ಇವಳ ಯಾವದೇ ಹಿ೦ತಿರುಗುವ ನಿರ್ಧಾರ ಅತ್ತ ಇನ್ನೊ೦ದು ಹೆಣ್ಣಿನ ಜೀವನಕ್ಕು ಸ೦ಚಕಾರ ಎ೦ಬುವದನ್ನು ಅವಳು ಮರೆಯಬಾರದು.
    ಈಸಬೇಕು -ಇದ್ದು ಜೈಸಬೇಕು. ನಿರ್ಧಾರ ತೆಗೆದುಕೊ೦ಡು ಅವನನ್ನ ಮರೆವೆನೆ೦ದು ಇನ್ನೊಬ್ಬನನ್ನು ಮದುವೆಯಾಗಿ, ಕೂಡಿ, ಮಕ್ಕಳನ್ನು ಪಡೆದ ಮೇಲೆ ಅವನು ಇಷ್ಟವಿಲ್ಲ ಹಿ೦ದಿನವನೂ ತಿರುಗಿ ಬ೦ದಿದ್ದನೆ ಎ೦ದು ಬಿಟ್ಟೋದುವದು ಸರಿಯಲ್ಲ. ಹಿ೦ದಿನವನು ಎ೦ಥಹವನು-ಹೆಜ್ಜೆ ಹಿ೦ದಕ್ಕಿಟ್ಟು, ಬೇರೊಬ್ಬಳೊಡನೆ ಸ೦ಸಾರ ಮಾಡಿ ಮಕ್ಕಳನ್ನು ಪಡೆದಿರುವನು. ಇವಳ ಈಗಿನ ನಿರ್ಧಾರದಿ೦ದ ಅವಳ ಪತಿ -ಮಕ್ಕಳು ಮತ್ತು ಇನ್ನೊ೦ದೆಡೆ ರಫ಼ೀಕ್-ನ ಹೆ೦ಡತಿ ಮಕ್ಕಳು ಪಾಡು ಪಡಬೇಕಾಗುವದು. ಇವರೆಲ್ಲರ ತೊ೦ದರೆಯಿ೦ದ ಇವರಿಬ್ಬರು ಸುಖವಾಗಿರುವರೇ?? ಸುಕವಾಗಿದ್ದರೂ ಸಮ್ಮತವೇ? ಪ್ರಶ್ನೆ ಅವಳಿಗೆ ಹಾಕಿ.

    ReplyDelete
  3. ಚುಕ್ಕಿ ಚಿತ್ತರ್ ಹಾಗೂ ಸೀತಾರಾಮ ಸರ್ ಗೆ ನನ್ನ ಹೃತ್ಪೂರ್ವಕ್ ಧನ್ಯವಾದಗಳು .

    @ಚುಕ್ಕಿಚಿತ್ತರ್
    ನಿಜ ಅವಳಿಗೆ ಒಂದು ಕೌನ್ಸಿಲಿಂಗ್ ತುಂಬಾ ಅಗತ್ಯವಾಗಿದೆ . ಇದರ ಮಧ್ಯೆ ಅವಳು ಇತ್ತಿತ್ತಲಾಗಿ ಕೆಲವೊಮ್ಮೆ ಕಾರಣ ಇಲ್ದೆ ಅಳೋದು ಮಾಡ್ತಾಳೆ , ಯಾಕೆ ದುಃಖ ಅಂತ ಅವಳಿಗೆ ಗೊತ್ತಿಲ್ಲ . ನಾನು ಹೇಳಿದರೆ ಅವಳಿಗೆ ಅಸ್ಟು ಪರಿಣಾಮ ಬಿರುತ್ತಿಲ್ಲ . ಅವಳು ಈವಾಗ ಹುಬ್ಬಳ್ಳಿಯಲ್ಲಿ ಇದ್ದಾಳೆ . ಗಂಡ SSLC ಕೂಡ ಪಾಸು ಮಾಡಿಲ್ಲ, ಅದರ ಜೊತೆ ಸ್ವಲ್ಪ ಲೋಕಜ್ಞಾನ ಕೂಡ ಕಡಿಮೆ .
    ಆದ್ರೆ ತುಂಬಾ ಸ್ಥಿತಿವಂತರು , ಮಕ್ಕಳ ಭವಿಷ್ಯಕ್ಕೆಅಂತ ಅವರೇನು ಚಿಂತೆ ಮಾಡೋ ಹಾಗಿಲ್ಲ . ಎಲ್ಲರೂ ಕುಳಿತು ತಿಂದರು ಕರಗದಸ್ಟು ಆಸ್ತಿ ಇದೆ . ಬಹುತೆಕ್ ಅದೇ ಕಾರಣದಿಂದ ಮನೆ ಗಂಡಮಕ್ಕಳು ಬೇಜವಾಬ್ದಾರಿ ಆಗಿದ್ದರೆ , ಹೆಣ್ಣುಮಕ್ಕಳು ಬೇರೆ ಬೇರೆ ಬೇಡದ ವಿಷಯಗಳಿಗೆ ತಲೆ ಹಾಕ್ತ ಇದ್ದಾರೆ . ಅವಳು ಬೇಸಿಗೆಯ ರಜೆಲಿ ಬೆಂಗಳೂರಿಗೆ ಬರುವ ವ್ಯವಸ್ತೆ ಮಾಡಿದಿನಿ . ಆದ್ರೆ ಬೆಂಗಳೂರಿನಲ್ಲಿ ಯಾರ್ ಹತ್ರ ಕೌನ್ಸೆಲಿಂಗ್ ಕೊಡಿಸಬೇಕು ಗೊತ್ತಾಗ್ತಾ ಇಲ್ಲ .

    ReplyDelete
  4. ಮನಸಾರೆ..
    ನನಗೆ ತಿಳಿದ ಮಟ್ಟಿಗೆ ಸೈ೦ಟ್ ಜಾನ್ಸ್ ಆಸ್ಪತ್ರೆಯಲ್ಲಿ ಮಾನಸಿಕ ಸಮಸ್ಯೆ ಗಳಿಗೆ ಚಿಕಿತ್ಸೆ ದೊರೆಯುತ್ತದೆ...ಒಮ್ಮೆ ನೀವು ಅಲ್ಲಿ ಹೋದರೆ ನಿಮ್ಮ ಏರಿಯಾದ ಹತ್ತಿರವಿರುವ ಮಾನಸಿಕತಜ್ನರ ಲಿ೦ಕ್ ಕೊಡುತ್ತಾರೆ.. ಅಥವಾ ನಿಮ್ಹಾನ್ಸ್ನಲ್ಲಿಯೂ ವಿಚಾರಿಸಿ..ಆದರೆ ಹೆಸಿಟೇಟ್ ಮಾಡಬೇಡಿ... ನೀವು ಹೇಳುವ ರೀತಿ ನೋಡಿದರೆ ಆಕೆಗೆ ಖಿನ್ನತೆ ಇದೆ ಅನ್ನಿಸುತ್ತದೆ...ಹ೦ತಗಳು ಹೆಚ್ಚಾದ೦ತೆ ತೊ೦ದರೆಗಳೂ ಹೆಚ್ಚಾಗುತ್ತವೆ..
    ಪ್ರೈಮರಿ ಸ್ಟಜಿನಲ್ಲಿದ್ದರೆ ಆಕೆ ಖ೦ಡಿತಾ ಸುಧಾರಿಸುತ್ತಾಳೆ...ತಡ ಮಾಡದಿರುವುದು ಒಳ್ಳೆಯದು. ಒ೦ದು ಚಾನ್ಸ್ ನೋಡಿ...

    ReplyDelete
  5. ಮನಸಾರೆ ಮೇಡಂ,
    ಅವರಿಗೆ ಮನಸ್ಸಿನ ಡಾಕ್ಟರ ಜರೂರತ್ತು ಇದೆ..... ಆದರೆ ಅವರಿಗೇ ಅವರ ಆರೈಕೆ ಎಲ್ಲದಕ್ಕಿಂತ ಮುಖ್ಯ....... ಎಲ್ಲಾ ಹಾಲು ಮಾಡೋದು ಈ ಮೊಬೈಲ್ ಮೇಡಂ, ನನಗೂ ಈ ರೀತಿ ಅನುಭವ ಹೇಳಿಕೊಂದವರ ಪರಿಚಯ ಇದೆ...., ಒಂದಂತೂ ನಿಜ .... ಒಂದು ವೇಳೆ ನಿಮ್ಮ ಗೆಳತಿ ರಫೀಕ್ ಜೊತೆ ಹೋದರೆ , ಅವನು ಯಾವತ್ತು ಅವಳನ್ನು ನಂಬಲ್ಲ.... ಒಬ್ಬ ಹೆಂಗಸು ಕೇವಲ ಪ್ರೀತಿಸಿದ ಗಂಡಿನ ಸಲುವಾಗಿ , ಮದುವೆಯಾದ ಗಂಡನನ್ನೇ ಬಿಟ್ಟು ಬಂದರೆ ಅವನು ಯೋಚಿಸೋದು ಹ್ಯಾಗಂದ್ರೆ '' ಇವಳು ನನಗಾಗಿ ಅವನನ್ನು ಬಿಟ್ಟು ಬಂದ್ರೆ, ನನಗಿಂತ ಇನ್ನೊಬ್ಬರು ಹೆಚ್ಚು ಪ್ರೀತಿ ತೋರಿಸಿದರೆ , ನನ್ನನ್ನು ಬಿಟ್ಟು ಹೋಗಲ್ಲ ಅಂತ ಏನು ಗ್ಯಾರಂಟಿ'' ? ..... ಗೆಳತಿಯ ಮಕ್ಕಳ ಸಲುವಾಗಿ ಅವಳ ಸುಖ ತ್ಯಾಗ ಮಾಡಲಿ...... i will pray for her .... ಒಳ್ಳೆ ಸುದ್ದಿ ಕೊಡಿ.......

    ReplyDelete
  6. @ಸೀತಾರಾಮ ಸರ್ ,
    ನೀವು ಹೇಳಿದ್ದು ತುಂಬಾನೇ ಸರಿಯಾದ ವಿಚಾರ . ರಫೀಕ್ ಗೆ ಮಕ್ಕಳಾಗಿಲ್ಲ . ಬಹುತೆಕ್ ಅವನು ಜೀವನದಲ್ಲಿ ಸ್ವಲ್ಪ ಜುಗುಪ್ಸೆಗೊಂಡಿದ್ದಾನೆ ಅನ್ನಿಸುತ್ತೆ . ಪ್ರಾಬ್ಲಮ್ ಅಂದ್ರೆ ಇವಳಿಗೆ ತಾನು ಮಾಡುವದು ತಪ್ಪು ಅಂತ ಖಂಡಿತ ಗೊತ್ತು , ಆದ್ರೆ ಅವನ್ ವಿಷ್ಯ ಬಂದ್ರೆ ಯಾಕೋ ತುಂಬಾ weak ಆಗ್ತಾಳೆ . ನಾನು ತುಂಬಾ restrict ಮಾಡಿದ್ರೆ ತುಂಬಾ ಬೇಜಾರು ಮಾಡ್ಕೊತಾಳೆ . ನಂಗು ಅವಳು ಹೇಳೋದು ಕೇಳಿದ್ರೆ ತುಂಬಾ ನೋವಾಗುತ್ತೆ . PUC ನಲ್ಲಿ naavu ಇಬ್ರು ಬರಿ ಒಂದೇ ವರ್ಷ odidaru , ನಂಗೆ ತುಂಬಾ ತುಂಬಾನೆ ಕ್ಲೋಸ್ ಫ್ರೆಂಡ್ . ಆ ದಿನಗಳಲ್ಲಿ ಅವಳು ಮನೆ ಬಿಟ್ಟು ಹೋಗಿದ್ದು , ಆಮೇಲೆ PUC ಮುಗಿಯುವ್ ಮುಂಚೆನೇ ಮನೇಲಿ ಮದುವೆ ಮಾಡಿಸಿದ್ದು ಎಲ್ಲ ನನ್ನ ಕಣ್ಣ ಮುಂದೇನೆ ನಡಿತು . ಮದುವೇಲಿ ಅವಳು ಬಿಕ್ಕಿ ಬಿಕ್ಕಿ ನನ್ನ ತಬ್ಕೊಂಡು ಅತ್ತಿದ್ದು ಇನ್ನು ನಂಗೆ ಹಸಿ ಹಸಿ ಆಗಿ ನೆನಪಿದೆ .
    ಆಮೇಲೆ ೨ ಮಕ್ಕಳಾದ ಮೇಲೆ ಎಲ್ಲ ಸರಿ ಹೋಯ್ತು ಅಂದ್ಕೊಂಡಿದ್ದೆ , ಆದ್ರೆ ಅವಳು ಸ್ವಲ್ಪ ದಿನಗಳ ಹಿಂದೆ ನಂಗೆ ಹೀಗೆ ಮಾಡ್ತಾ ಇದ್ದೀನಿ ಅಂತ ಹೇಳಿದಾಗ್ ಶಾಕ್ ಆಗಿ ಹೋಯ್ತು . ತಾಯಿಗೆ ಜೀವನದಲ್ಲಿ ಮಕ್ಕಳಿಗಿಂತ ಮುಖ್ಯ ಏನು ಇಲ್ಲ . ಅವಳಿಗೆ ನಾನು ಅದನ್ನೇ ಹೇಳೋದು . ಮಕ್ಕಳಿಗೊಸ್ಕರ್ ನೀನು ಜೀವನದಲ್ಲಿ compromise ಮಾಡ್ಕೊಬೇಕಾಗುತ್ತೆ ಅಂತ ಹೇಳಿ ಹೇಳಿ ಸಾಕಾಯ್ತು . ಅವಳ ಮುದ್ದಾದ ೨ ಮಕ್ಕಳ ಮುಖ ನೋಡಿದ್ರೆ ಅವಳ ಮೇಲೆ ಇಲ್ಲದ ಕೋಪ ಬರುತ್ತೆ . ಆದ್ರೆ ಅವಳು ಈಗಿರುವ ಪರಿಸ್ಥಿತಿ ನೋಡಿದ್ರೆ depression ಇನ್ನು ಜಾಸ್ತಿ ಆಗಬಾರದು ಅಂತ ತಾಳ್ಮೆ ಇಂದ ಬುದ್ದಿ ಹೇಳ್ತೀನಿ . ಮಕ್ಕಳಿಗೆ ಒಂದು ಸದೃಡ, ಧನಾತ್ಮಕ ವಾತಾವರಣ ಕೊಡುವದು ಅತ್ಯಗತ್ಯ ವಾಗಿದೆ . ಅದನ್ನ ಅವಳಿಗೆ ಹೇಗೆ ತಿಳಿ ಹೇಳ್ಬೇಕು ಗೊತ್ತಾಗ್ತಾ ಇಲ್ಲ .

    ReplyDelete
  7. ಮನಸಾರೆ...

    ನಿನ್ನೆ ನನ್ನ ಪ್ರತಿಕ್ರಿಯೆ ಹಾಕಿದ್ದೆ..
    ಯಾಕೆ ಬರಲಿಲ್ಲ ಗೊತ್ತಾಗಲಿಲ್ಲ...

    ಒಂದು ವಯಸ್ಸಿನ ಪ್ರೀತಿ, ಪ್ರೇಮ....
    ತಪ್ಪಾಗೋದು.. ಎಲ್ಲವೂ ಓಕೆ...

    ಈಗಿನ ಗಂಡ ಸರಿಯಿಲ್ಲ...
    ಮತ್ತೆ ಹಳೆಯ ಪ್ರಿಯಕರ ಬಂದಿದ್ದಾನೆ...
    ಮತ್ತೆ ಮನ ಡೋಲಾಯಮಾನವಾಗುತ್ತಿದೆ...
    ಇದನ್ನೂ ಸ್ವಲ್ಪ ಮಟ್ಟಿಗೆ ಒಪ್ಪಿಕೊಳ್ಳೋಣ...

    ಆದರೆ...
    ಏನೂ ತಪ್ಪು ಮಾಡದ ಆ ಕಂದಮ್ಮಗಳ ಬಾಳು ...?

    "ತನ್ನಮ್ಮನಿಗೆ ಒಬ್ಬ ಪ್ರಿಯಕರ ಇದ್ದ..
    ಅವ ಅವಳನ್ನು ಬಿಟ್ಟಿದ್ದಕ್ಕೆ ಇನ್ನೊಬ್ಬಳನ್ನು ಮದುವೆಯಾದಳು...
    ಅಪ್ಪನೂ ಸರಿ ಇರಲಿಲ್ಲ...
    ಹಾಗಾಗಿ ನಮ್ಮಮ್ಮ ನಮ್ಮನ್ನು ಬಿಟ್ಟು ಮತ್ತೆ ಹಳೆಯ ಗೆಳೆಯನೊಂದಿಗೆ ಹೋಗಿಒದ್ದಾಳೆ...
    ಅಥವಾ ಕರೆದು ಕೊಂಡು ಬಂದಿದ್ದಾಳೆ..."

    ನಾವು ಇಲ್ಲಿ ಬರೆಯೋದು... ನೀವು ಓದೋದುವಷ್ಟು ಸರಳವಲ್ಲ..
    ಇವೆಲ್ಲ ಆ ಕಂದಮ್ಮಗಳ ಬದುಕಿನಲ್ಲಿ...

    ಆ ವಯಸ್ಸಿನಲ್ಲಿ ಹುಟ್ಟುವ ಪ್ರಶ್ನೆಗಳಿಗೆ ಬದುಕೆಲ್ಲ ಹುಡುಕಿದರೂ ಸಿಗದ ಉತ್ತರಗಳು...

    ದೇಹದ ತೆವಲಿಗೆ ಹುಟ್ಟಿದರೂ...
    ಅವುಗಳಿಗಾಗಿ ಬದುಕುವದರಲ್ಲಿ ಬಾಳಿಗೊಂದು ಸಾರ್ಥಕತೆಯಿದೆ...

    ಕೀಳರಿಮೆ, ಅತಂತ್ರದ ಭಾವನೆಯಿಂದ..
    ಬದುಕ ಬೇಕಾದ ಆ ಕಂದಮ್ಮಗಳಿಗೆ...
    ಆತ್ಮ ವಿಶ್ವಾಸದ ಬದುಕು ಕೊಟ್ಟಲ್ಲಿ ಸಾರ್ಥಕತೆಯಿದೆ...
    ಜವಾಬ್ದಾರಿಗೊಂದು ಅರ್ಥವಿರುತ್ತದೆ..

    ಈ ಪ್ರೇಮ ಕಾಮಗಳು ಇನ್ನೆಷ್ಟು ದಿನ ?

    ಬೇಕಿದ್ದರೆ ಈಗಿನ ಗಂಡನನ್ನು ಬಿಡಲಿ...
    ಮತ್ತೆ ಹಳೆಯ ಪ್ರಿಯಕರನ್ನಲ್ಲಿ ಹೋಗಿ...
    ಬದುಕು ಕಂಡುಕೊಳ್ಳುವ ಮೂರ್ಖತನ ಮಾಡದಿದ್ದರೆ ಒಳ್ಳೆಯದು...

    ಹಳೆಯ ಪ್ರಿಯಕರ, ಮತ್ತು ಇವಳಿಗೂ ಮಕ್ಕಳಾಗುತ್ತವೆ...
    ಈ ಕಂದಮ್ಮಗಳು ಹೇಗಿದ್ದರೂ ಹಳೆಯ ಪ್ರಿಯಕರನಿಗೆ "ಪರಾಯ"

    ಎಷ್ಟಿದ್ದರೂ ತನ್ನವರೇ... ತನ್ನವರು

    ತನ್ನ ಪ್ರೇಮದ ಸೆಳೆತ... ಕಾಮವನ್ನು...
    ಮಕ್ಕಳ ಬದುಕಲ್ಲಿ ಆಟವಾಡದಿದ್ದರೆ ಒಳಿತು...

    ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ ಎಂದು ಹಾರೈಸುವೆ....

    ReplyDelete
  8. ದಿನಕರ ಸರ್,
    ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು . ನಿಜ ಅವಳು ಹಾಗೆ ರಫೀಕ್ ಜೊತೆ ಹೋದ್ರೆ , ರಫೀಕ್ ಅಸ್ಟೇ ಅಲ್ಲ ಯಾರು ನಂಬೋಲ್ಲ . ಅವಳು ಹೋಗೋದು ದೂರ ಇರಲಿ , ಅವನ್ ಜೊತೆ ಫೋನ್ ನಲ್ಲಿ ಮಾತಾಡೋದು ತಪ್ಪು ಅಂತ ನನ್ನ ಭಾವನೆ . ಅವಳಿಗೆ ಮೊಬೈಲ್ ನಂಬರ್ ಚೇಂಜ್ ಮಾಡು ಅಂತ ಸುಮಾರು ಸಲ ಹೇಳಿದ್ದೀನಿ ,ಹ್ಞೂ ಅಂತಾಳೆ ಆದ್ರೆ ಮಾಡೋಲ್ಲ . ನಂಗು ಅವಳಿಗೆ ಹೇಗೆ ಹೇಳಬೇಕು ಅಂತ ತೋಚ್ತಾ ಇಲ್ಲ ಅದಕ್ಕೆ ಈ ಪೋಸ್ಟ್ ಹಾಕಿದೆ . ನನ್ನ ಪತಿ ಅವಳಿಗೆ ಮಾನಸಿಕ ಡಾಕ್ಟರ ಅಗತ್ಯ ಇದೆ ಅಂತ ಹೇಳಿದಾಗ್ ಅವರ ಜೊತೆ ಕೊಪಿಸ್ಕೊಂಡಿದ್ದೆ , ಆದ್ರೆ ಅವಳ ಇತ್ತೀಚಿನ ನಡುವಳಿಕೆ ನಂಗೆ ಗಾಬರಿ ತರಿಸುತ್ತ ಇದೆ . ಅದಕ್ಕೆ ನನಗೋ ಅನ್ನಿಸಿತು " she is in full depression" ಅಂತ . ಯಾವ್ ಹೆಂಗಸು ಮಕ್ಕಳ ಬಗ್ಗೆ ಕೇರ್ ಮಾಡದೆ ಇರೋಲ್ಲ . ಆದ್ರೆ ಅವಳು ಇಷ್ಟು ವರ್ಷ ಬರಿ ಮನಸಿನಲ್ಲಿ ಕೊರಗಿದ್ದಾಳೆ . ಗಂಡನ ಒಂದೊದು ತಪ್ಪಿಗೂ , ಛೆ ಅವನಿದ್ರೆ ಹೀಗೆ ಮಾಡ್ತಾ ಇರಲಿಲ್ಲ ಅಂತ ೧೫ ವರ್ಷ ಅವನ್ನ ಮಿಸ್ ಮಾಡ್ಕೊಂಡಿದ್ದಾಳೆ . ಅದರಲ್ಲಿ ತಾನು ರಫೀಕ್ದಿಂದ ತಿರಸ್ಕರಿಸಲ್ಪತ್ತಿದ್ದೆ ಅಂತ ಫೀಲಿಂಗ್ ಇತ್ತು ಅವನು ವಾಪಾಸ್ ಬಂದು ಇವಳ ಅತ್ಮವಿಶ್ವಸ್ ಹೆಚ್ಚಿಸಿದ್ದಾನೆ . ಒಂದು ಸಂತೋಷ ಅಂದ್ರೆ ಅವಳಿಗೆ ತಾನ್ ಮಾಡ್ತಿರೋದ್ ತಪ್ಪು ಅಂತ ಗೊತ್ತು , ಸ್ವಲ್ಪ ಹೆಲ್ಪ್ ಮಾಡಿದ್ರೆ ಹೊರ ಬರ್ತಾಳೆ ಅನ್ನೋ ವಿಶ್ವಸ್ ನನಗಿದೆ . ನಮ್ಮ ಜೊತೇಲಿ ನೀವು ಇದ್ದೀರಾ , ಅದೇ ಸಂತೋಷ್ .

    ಮನಸಾರೆ

    ReplyDelete
  9. ಮನಸಾರೆ ಮೇಡಮ್,

    ನಿಮ್ಮ ಲೇಖನವನ್ನು ಓದಿದಾಗ ನನಗನ್ನಿಸಿದ್ದು ಇಷ್ಟು. ನಿಮ್ಮ ಗೆಳತಿಯ ಸಮಸ್ಯೆಗೆ ಪರಿಹಾರ ತಿಳಿಸುವಷ್ಟು ಬಿದ್ದಿವಂತನಲ್ಲದಿದ್ದರೂ ನನಗನ್ನಿಸಿದ್ದು ಹೀಗೆ.

    ಮೊದಲು ಆಕೆ ಜಾಗವನ್ನು ಬದಲಾಯಿಸಬೇಕು. ಮತ್ತು ಮುಖ್ಯವಾಗಿ ಆಕೆಯ ಮೊಬೈಲು ಮತ್ತು ಫೋನ್ ನಂಬರ್ ಬದಲಾಯಿಸಬೇಕು. ಆಗ ನಿದಾನವಾಗಿ ಬದಲಾಗಲು ಸಾಧ್ಯವಾಗಬಹುದು. ಫೋನು ಸುಲಭಸಾಧನವಾದ್ದರಿಂದ ಅದರಿಂದಲೇ ಕಿತಾಪತಿ ಹೆಚ್ಚು. ಮತ್ತು ಆಕೆ ಬೇರೆಯಾವುದಾದರು ಜವಾಬ್ಡಾರಿ ಅಥವ ಕೆಲಸವನ್ನು ಹೊಸದಾಗಿ ವಹಿಸಿಕೊಂಡಾಗ ಅದರ ಒತ್ತಡದಲ್ಲಿ ಇದೆಲ್ಲವನ್ನು ಮರೆಯಬಹುದು ಅಂತ ನನಗನ್ನಿಸುತ್ತದೆ.
    ನಿಮ್ಮದೇ ಅನುಭವವೆನ್ನುವಂತ ಬರಹ ಚೆನ್ನಾಗಿದೆ.

    ReplyDelete
  10. ಮನಸಾರೆ ಮೇಡಂ,
    ತುಂಬಾ ಮನಸ್ಸನ್ನು ಕೊರೆದ ವಿಚಾರ ಇದು..... ಆ ವ್ಯಕ್ತಿಯ ಜಾತಿ ಮುಕ್ಯ ಅಲ್ಲ ಇದು...... ನಿಮ್ಮ ಗೆಳತಿ ಆತನ ಜೊತೆ ಬಾಳಲು ಆರಂಬಿಸಿದರೆ ಶುರು ಆಗತ್ತೆ, comparsion between ರಫಿಕ್ and her old husband ..... ಗಂಡನಾದವನು , ಹೆಂಡತಿ ಪ್ರೀತಿ ತನಗೊಬ್ಬನಿಗೆ ಅಂತಾನೆ...... ನಿಮ್ಮ ಗೆಳತಿ, ಮಕ್ಕಳನ್ನು ಜೊತೆ ಕರೆ ತಂದಾಗ ನಡೆಯೋ ಘಟನೆ, ಬಾಳನ್ನು ನೆನಸಿದರೆ ತುಂಬಾ ಬೇಜಾರಾಗತ್ತೆ..... ಪ್ರಕಾಶಣ್ಣ ಹೇಳಿದ ಹಾಗೆ ದೇಹದ ತೆವೆಲಿಗೆ ಮಕ್ಕಳು ಹುಟ್ಟಿದರೂ, ಅದು ಅವರಿಬ್ಬರ ರಕ್ತ ಹಂಚಿ ಹುಟ್ಟಿದೆ...... ಮೊದಲಿನ ರಫೀಕ್ ನಲ್ಲಿ, ಸಂಯಮ ಇದ್ದರೆ, ಈಗ ಅದು ಎಲ್ಲಿ ಹೋಗಿದೆ...... ನನಗನ್ನಿಸೋದು..... ಮೊದಲು ಅವರು ಜಾಗ ಚೇಂಜ್ ಮಾಡಲಿ, ಕೆಲಸ ಮಾಡಲಿ....... ಮಕ್ಕಳಿಗಾಗಿ ಎಲ್ಲಾ ಟೈಮ್ ಕೊಡಲಿ........ ಮೊಬೈಲ್, ಫೋನ್ ಎಲ್ಲಾ ಬಿಟ್ಟು...... ಸ್ವಲ್ಪ ಟೈಮ್ ಬೇರೆ ಯೋಚನೆ ಮಾಡಲಿ........ ಇದೆಲ್ಲಾ ಮಾಡಿಯೋ, ಇದೆ ಮುಂದುವರಿದರೆ....... ನೋಡೋಣ.... ನಮ್ಮ ಚಿಂತನೆಯನ್ನೇ ಬದಲಿಸಿಕೊಳ್ಳಬೇಕಾಗಿ ಬರಬಹುದು..... ಹಾಗಾಗದಿರಲಿ..... ..

    ReplyDelete
  11. ಪ್ರಕಾಶ್ ಅಣ್ಣ ,
    ನಿಮ್ಮ ಅಭಿಪ್ರಾಯ ನೂರಕ್ಕೆ ನೂರು ಸತ್ಯ . ಈ ಎಲ್ಲದರ ನಡುವೆ ಆ ಮುಗ್ದ ಹಸುಳೆಗಳಿಗೆ ಅನ್ಯಯವಾಗ್ತಾ ಇದೆ . ಒಂದು ಮಾತು ನನ್ಗೊತ್ತಿರುವ ಪ್ರಕಾರ್ ಅವಳು ರಫೀಕ್ ಜೊತೆ ಮತ್ತೆ ಸೇರಲು ಪ್ರಯತ್ನಿಸುತ್ತಿಲ್ಲ . ಆದ್ರೆ ಅವನ್ ಜೊತೆ ಮಾತಾಡುವುದು , ಭೆಟ್ಟಿ ಆಗುವದು ನಿಲ್ಲಿಸ್ತ ಇಲ್ಲ . ಅವಳ ಈ ವರ್ತನೆ ಇಂದ ಮಕ್ಕಳ ಮನಸ್ಸಿನ ಮೇಲೆ ಘೋರ ಪರಿಣಾಮ ಬಿಳ್ತಾ ಇದೆ ಅನ್ನೋದು ಅವಳಿಗೆ ಅರ್ಥ ಮಾಡಿಸೋಕೆ ನಂಗೆ ಆಗ್ತಾ ಇಲ್ಲ . ಏನ್ ಹೇಳಿದ್ರು , ಕೇಳಿದ್ರು " ನಾನು ಇಲ್ಲಿವರೆಗೂ ಬರಿ ಇನ್ನೋಬರಿಗೊಸ್ಕರ್ ನೆ ಜೀವನನ ಕಾಂಪ್ರೋಮೈಸ್ ಮಾಡ್ಕೊಳ್ತಾ ಬಂದಿದೀನಿ , ಆವಾಗ್ ನಂಗೆ ಯಾರು ಹೇಳಿಲ್ಲ . ಆದ್ರೆ ಈವಗ್ ನಂಗೆ ಯಾವದೋ ರೂಪದಲ್ಲಿ ಮನಸಿಗೆ ಆನಂದ ಸಿಗ್ತಾ ಇದೆ ಅಂದ್ರೆ , ಅದು ತಪ್ಪು , ಇದು ತಪ್ಪು , ಗಂಡನಿಗೆ ಅನ್ಯಾಯ , ಮಕ್ಕಳಿಗೆ ಅನ್ಯಾಯ ಯಾಕೆ ಅಂತ ಕೇಳ್ತಿರ " ಅಂತ ಅಳೋಕೆ ಶುರು ಮಾಡ್ತಾಳೆ .
    ಅವಳಿರೋದು ಅವಿಭಕ್ತ ಕುಟುಂಬ . ಗಂಡ , ಭಾವ, ದೊಡ್ಡ ನೆಗ್ಯನಿ , ಅತ್ತೆ , ಭಾವ ನ ಮಕ್ಕಳು ಕೂಡಿ ಇದ್ದಾರೆ . ಇವಳ ಗಂಡ ಏನು ಕೆಲಸ ಮಾಡದೆ ಇರೋ ಕಾರಣಕ್ಕೆ , ಇವಳು ಹಾಗೂ ಇವಳ ಮಕ್ಕಳು ಎಲ್ಲದಕ್ಕೂ ಅತ್ತೆ , ಇಲ್ಲ ಭಾವನ ಮುಂದೆ ಕೈ ಚಾಚಬೇಕು . ಇತ್ತಿಚಿಕೆ ಅತ್ತೆಯ ಅಧಿಕಾರ ನಡೀತಾ ಇಲ್ಲ , ಎಲ್ಲ ದೊಡ್ಡ ಸೊಸೆ ಕಾರೋಭಾರು . ಅವಳ ಹೇಳಿದ ಕೆಲಸ ಇವಳು ಮಾಡ್ಬೇಕು , ಮಕ್ಕಳಿಗೆ ಒಂದು ಪೆನ್ಸಿಲ್ ಕೊಡಿಸಬೇಕದ್ರು ಅವಳ ಹತ್ರ ನೆ ಕೈ ಚಾಚ ಬೇಕು . ಮೊದಲಿಂದಲೂ ಸ್ವಾಭಿಮಾನ್ ಇವಳಿಗೆ ಜಾಸ್ತಿ . ತುಂಬಾ ಜಾಣೆ . ನನಗನಿಸುತ್ತೆ ಅವಳು ಹೀಗೆ ಮಾಡಲು ಇವು ಎಲ್ಲ ಪ್ರೇರೇಪಿಸಿರಬೇಕು .
    ನೀವು ಹೇಳಿದ ಹಾಗೆ ಅವಳು ಮಕ್ಕಳಿಗಾಗಿ ಇಂದಿನ ಎಲ್ಲ ದುಖ ಮರಿಬೇಕು . ಅವರಿಗೊಸ್ಕರ್ ಒಂದು ಒಳ್ಳೆಯ ನಿರ್ಧಾರ ತೊಗೋಬೇಕು . ಅವರಿಗೆ ಒಂದು ಸ್ವಚ್ಛ ಹಾಗೋ ತಲೆ ಎತ್ತಿ ಸಮಾಜದಲ್ಲಿ ಬದಕೋ ವಾತಾವರಣ ಕೊಡೋದು ತಂದೆ ತಾಯಿಯ ಧರ್ಮ . ಅದು ಅವಳಿಗೆ ಅರ್ಥ ಆದ್ರೆ ಈ ಪ್ರಾಬ್ಲಮ್ ಎಲ್ಲ ಕಳೆದು ಹೋಗುತ್ತೆ .

    ಮನಸಾರೆ

    ReplyDelete
  12. ಮನಸಾರೆ,

    ಮನೋವೈದ್ಯರಲ್ಲಿಗೆ ಹೋಗುವ ಮೊದಲು ಸ್ಥಳ ಬದಲಾವಣೆ ಮಾಡಿಸಿ ನೋಡಿ. ಹೊಸ ವಾತಾವರಣ ಮತ್ತು ಒಂದಷ್ಟು ಬಿಡುವಿಲ್ಲದ ಕೆಲಸಗಳನ್ನು ಹಚ್ಚಿ ನೋಡಿ,...ಮೊಬೈಲ್, E-mail ..ಇತ್ಯಾದಿಗಳಿಂದ ಸ್ವಲ್ಪ ದೂರವಿರಲಿ. ಏಕೆಂದರೆ, ಒಮ್ಮೇಗೆ ಮನೋವೈದ್ಯರಲ್ಲಿಗೆ ಹೋಗಬೇಕೆಂದು ಗೊತ್ತಾದರೆ ಆಕೆ ಇನ್ನಷ್ಟು Dippression ಗೆ ಒಳಗಾಗಬಹುದು !. ಹೊಸ ಪರಿಸರವನ್ನು ಪರಿಚಯಿಸಿ ಮತ್ತು ನಿಧಾನವಾಗಿ ಮನೋತಜ್ಞರಲ್ಲಿ ಕರೆದೊಯ್ಯಿರಿ. ಸ್ಥಳ ಬದಲಾವಣೆಯ ನಂತರ ಬದುಕಿನ ಕೆಲವು ವಾಸ್ತವ ಸಂಗತಿಗಳನ್ನು ತಿಳಿಸಿಕೊಡಲು ಪ್ರಯತ್ನಿಸಿ...ಒಳ್ಳೆಯದಾಗಲಿ

    ReplyDelete
  13. ಶಿವೂ ಸರ್,
    ತುಂಬಾ ಸೂಕ್ತ ಸಲಹೆಗಳನ್ನ ಕೊಟ್ಟಿದ್ದಿರ , ಧನ್ಯವಾದಗಳು . ಅವಳು ಜಾಗ ಬದಲಿಸೋದು ಸ್ವಲ್ಪ ಕಷ್ಟದ ಕೆಲಸ . ನಾನು ಹೇಳಿದಾಗೆ ಅವಳದು ಅವಿಭಕ್ತ ಕುಟುಂಬ . ಹುಬ್ಬಳಿಯಲ್ಲೇ ಅವರ ಬ್ಯುಸಿನೆಸ್ ಇದ್ದಿದ್ದರಿಂದ , ಅವಳು ಅಲ್ಲಿಂದ ಎಲ್ಲೂ ಹೋಗೋಕೆ ಆಗೋಲ್ಲ . ಬೇರೆ ಕಡೆ ಹೋಗಬೇಕು ಅಂದ್ರೆ ಮನೇಲಿ ನೂರ ಎಂಟು ಪ್ರಶ್ನೆ . ಆಮೇಲೆ ಬೇರೆ ಇವಳು ಎಲ್ಲಿಗೆ ಹೋಗಬೇಕು? . ಮೊಬೈಲ್ ನಂಬರ್ ಚೇಂಜ್ ಮಾಡೋಕೆ ನಾನು ಸುಮಾರು ೩ ತಿಂಗಳಿಂದ ಪ್ರಯತ್ನಿಸುತ್ತಾ ಇದ್ದೀನಿ . ಕೆಲವೊಂದು ಸಲ ಅವಳ ಈ ಮೊಂಡುತನಕ್ಕೆ ಬೇಸರಗೊಂದು ಮಾತು ಬಿಟ್ಟಿದ್ದೆ . ಕಷ್ಟದಲ್ಲಿರೋವಾಗ್ ನಾನು ಅವಳ ಜೊತೆ ಇಲ್ಲದಿದ್ದರೆ , ನನ್ನ ಗೆಳೆತನಕ್ಕೆ ಅರ್ಥ ಇರೋಲ್ಲ ಅಂತ , ಮತ್ತೆ ಫೋನ್ ಮಾಡ್ತೀನಿ . ಆದ್ರೆ ಈ ಸಲ ಬೇಸಿಗೆ ರಜೆಗೆ ನಮ್ಮನಿಗೆ ಬಂದಾಗ್ ಅವಳ ಮೊಬೈಲ್ ನಂಬರ್ ಚೇಂಜ್ ಮಾಡಿಸ್ತೀನಿ . ನೋಡೋಣ ನನ್ನ ಪ್ರಯತ್ನ ಏನಾಗುತ್ತೆ ಅಂತ . ಅವಳಿಗೆ ಬ್ಯುಸಿ ಇರಲು ಏನಾದ್ರೂ ಮಾಡು ಅಂತ ಹಿಂದೆ ಬಿದ್ದಗ್ , ಅವಳು L I C ಏಜೆಂಟ್ ಆಗಿ ತುಂಬಾ ಉತ್ಸಾಹದಿಂದ ಕೆಲಸ ಮಾಡೋಕೆ ಶುರು ಮಾಡಿದ್ರೆ , ಅವಳ ಅತ್ತೆ ಹಾಗೂ ನೆಗ್ಯನಿ ಅದನ್ನ ಮಾಡಬೇಡ , ನಮ್ಮ ಮನೆಯ ಘನತೆಗೆ ಸರಿ ಅಲ್ಲ . ನಮ್ಮ ಮನೆ ಹೆಣ್ಣುಮಕ್ಕಳು ಕೆಲಸ ಮಾಡೋ ದುರ್ಭಾಗ್ಯ ಇನ್ನು ಬಂದಿಲ್ಲ ಅಂತ ಬಿಡಿಸಿ ಬಿಟ್ಟರಂತೆ . ಅದಕ್ಕೆ ಸ್ವಲ್ಪ ದಿನ ಮಂಕಾಗಿದ್ದಳು , ತುಂಬಾ ತುಂಬಾನೇ ಬೇಜಾರಗಿದ್ಲು .
    ಆದ್ರೆ ಇತ್ತೀಚಿಗೆ ಅವಳು ಬೆಳಿಗ್ಗೆ ಎದ್ದು ಹುಬ್ಬಳಿ ಸಿದ್ದಾರೂಡ ಮಠಕ್ಕೆ ಹೋಗಿ ಕಸ ಗುಡಿಸಿ , ನೀರು ಹಾಕಿ ಸೇವೆ ಮಾಡಿ ಸ್ವಲ್ಪ ಟೈಮ್ ಅಲ್ಲಿಯೇ ತೆಗಿಯುತ್ತ ಇದ್ದಾಳೆ . ಅದೊಂದು ತುಂಬಾ ಒಳ್ಳೆಯ ಬೆಳವಣಿಗೆ ಆಗಿದೆ .

    ಮನಸಾರೆ

    ReplyDelete
  14. ಸುಬ್ರಮಣ್ಯ ಸರ್,
    ನಿಮ್ಮ ಸಲಹೆಗಳಿಗೆ ಧನ್ಯವಾದಗಳು . ನಾನು ಶಿವೂ ಸರ್ ಗೆ ಹೇಳಿದ ಹಾಗೆ ಮನೆ ಚೇಂಜ್ ಮಾಡೋದು ಅವಳಿಗೆ ಸಾದ್ಯವಿಲ್ಲ ಅನ್ನಿಸುತ್ತೆ . ಅವಳದು ಅವಿಭಕ್ತ ಕುಂಟುಂಬ , ಹಾಗೆ ಇವಳು ಬೇರೆ ಆಗೋದು ದೂರದ ಮಾತು . ಆದ್ರೆ ಸ್ವಲ್ಪ ದಿನದ ಮಟ್ಟಿಗೆ ಬೆಂಗಳೂರಿಗೆ ಬರ್ತಾ ಇದ್ದಾಳೆ , ನೋಡೋಣ ಏನಾದ್ರು ಒಂದು ಧನಾತ್ಮಕ ಬದಲಾವಣೆ ಬರುತ್ತಾ ಅಂತ .
    ಇನ್ನು ಅವಳಿಗೆ ಇಂಟರ್ನೆಟ್ , ಇಮೇಲ್ ಸಂಪರ್ಕ ಇಲ್ಲ . ಅವಳಿಗೆ ಇವುಗಳ ಬಗ್ಗೆ ಗೊತ್ತು ಇಲ್ಲ . ಆದ್ರೆ ಈ ಫೋನ್ ಎಲ್ಲ ಹಾಳು ಮಾಡ್ತಾ ಇದೆ . ಅವರಿಬ್ಬರನ್ನ ಇನ್ನಸ್ಟು ಹತ್ತಿರ ಸೇರಿಸ್ತ ಇದೆ . ನೀವು ಹೇಳಿದ ಹಾಗೆ ಮನೋವೈದ್ಯರನ್ನ ಭೆಟ್ಟಿ ಮಾಡಿಸಿದರೆ ಇನ್ನಸ್ಟು depression ಗೆ ಕಾರಣ ವಾಗಬಹುದು . ಮೊದಲ ಮೊದಲು ನಮ್ಮ ಮನೆಯವರು ಅವಳನ್ನ ಮನೋವೈದ್ಯರ ಹತ್ತಿರ ಕರೆದೊಯ್ಯೋಣ ಅಂದಾಗ್ ನಾನೇ ಕೊಪಿಸ್ಕೊಂಡಿದ್ದೆ . ಅವಳಿಗೆ ಅಂಥದೇನು ಆಗಿದೆ ಅಂತ ಅವರ ಜೊತೆ ವಾದನು ಮಾಡಿದ್ದೆ . ಆದ್ರೆ ಆವಳು ಇತ್ತೀಚಿಗೆ ತುಂಬಾ ಅಳೋದು ಶುರು ಮಾಡಿದ್ದಾಳೆ . ಕೆಲವೊಂದು ಸಲ ಫೋನ್ ಮಾಡಿ ಸುಮ್ಮನೆ ನಂಗೆ ಬೇಜಾರು ಅಂತ ಅಳ್ತಾಳೆ , ಕಾರಣ ಕೇಳಿದ್ರೆ ಅವಳಿಗೆ ಗೊತ್ತಿರೋದು ಇಲ್ಲ , ಹಾಗೆ ಏನು ಕಾರಣವು ಇರೋಲ್ಲ . ಈ ಬೆಳವಣಿಗೆ ನೋಡಿದ್ರೆ ಖಂಡಿತ ಅವಳಿಗೆ ಕೌನ್ಸಿಲಿಂಗ್ ಅಗತ್ಯ ಇದೆ . ಆದ್ರೆ ಕೌನ್ಸಿಲಿಂಗ್ ಮುಂಚೆ ಮೇಲೆ ಎಲ್ಲರು ಹೇಳಿದ ಹಾಗೆ ಸ್ಥಳ , ಮೊಬೈಲ್ ಬದಲಾವಣೆ , ಅದರ ಜೊತೆ ಏನಾದ್ರೂ ಕೆಲಸ ಅಂತ ಬ್ಯುಸಿ ಮಾಡಿದ್ರೆ ಹೆಲ್ಪ್ ಆಗುತ್ತೆ ಏನೋ ನೋಡೋಣ

    ಮನಸಾರೆ

    ReplyDelete
  15. ದಿನಕರ ಸರ್
    ಮತ್ತೆ ಬಂದು ನಿಮ್ಮ ಸೂಕ್ತ ಸಲಹೆಗಳನ್ನ ನೀಡಿದಕ್ಕೆ ಧನ್ಯವಾದಗಳು . ನಿಜ ಇದು ಮನ ಕೊರೆಯುವ್ ವಿಚಾರ .ನಂಗು ಮನಸು ಕೊರೆತ ಇದೆ , ನನಗೆ ಗೊತ್ತಾಗಿ ಸುಮಾರು ೬ ತಿಂಗಳಾಗಿದೆ .
    ಹಾ ನಿಮಗೆ ಹೇಳೋದು ಮರಿತ್ತಿದ್ದೆ , ಅವಳು ಒಬ್ಬ ಒಳ್ಳೆ ಹಾಡುಗಾರ್ತಿ . ನಿಮ್ಮೆಲ್ಲರ್ ಸಲಹೆ ಅಂತೆ ಅವಳಿಗೆ ಹಾಡಿನಲ್ಲೇ ಏನಾದ್ರು ಬ್ಯುಸಿ ಇರೋಕೆ ಆಗುತ್ತ ಅಂತ ಯೋಚಿಸ್ತೀನಿ . ಅವಳು ಸಂಗೀತ ಕ್ಲಾಸ್ ಹೇಳಿ ಕೊಡಬಹುದು . ಅವರ ಮನೆ ಸಿದ್ದಾರೂಡ ಮಠದ ಹತ್ರ ಇದ್ದದರಿಂದ ಅಲ್ಲಿ ಹೋಗಿ ಭಜನೆ , ಕೀರ್ತನೆಗಳನ್ನ ಹೇಳಿಕೊಡಬಹುದು . ಒಳ್ಳೆ ಐಡಿಯಾ . ಥ್ಯಾಂಕ್ಸ್ ರೀ ನನ್ನ ತಲೆ ಕೆಲಸ ಮಾಡೋ ಹಾಗೆ ಮಾಡಿದ್ದೀರಾ

    ಮನಸಾರೆ

    ReplyDelete
  16. ಆ ಮುಸ್ಲಿಂ ಹುಡುಗ ಎಂಥವನೋ ಗೊತ್ತಿಲ್ಲದೇ ಬಿಟ್ಟಿ ಸಲಹೆ ಕೊಡುವುದು ಕಷ್ಟ. ಮದುವೆಯಾಗುವ ಮೊದಲು ಧೈರ್ಯ ತೋರಿಸದೇ ಈಗ ಬಂದು ಬಿರುಗಾಳಿ ಎಬ್ಬಿಸುವುದು ತಪ್ಪು ಎಂದು ನೀವನ್ನುತ್ತೀರೇನೋ. ಆದರೆ ನನಗ್ಯಾಕೋ ಹಾಗನ್ನಿಸುತ್ತಿಲ್ಲ. ಮದುವೆಗೆ ಮೊದಲೂ, ನಂತರಕ್ಕೂ ಇರುವ ವ್ಯತ್ಯಾಸವೆಂದರೆ ಸೆಕ್ಸ್ ಮತ್ತು ಮಕ್ಕಳು ಮಾತ್ರ.

    ನಾನು ಹೇಳುವುದನ್ನು ಕೇಳಿದರೆ, ನನಗೇ ಮಾನಸಿಕ ವೈದ್ಯರ ಅಗತ್ಯವಿದೆ ಎಂದು ಮಡಿವಂತ ಬ್ಲಾಗಿಗರು ನಿರ್ಧರಿಸಬಹುದೇನೋ! ಆದರೂ ನನಗನ್ನಿಸಿದ್ದನ್ನು ಹೇಳಿಬಿಡುತ್ತೇನೆ!

    ನಿಜಕ್ಕೂ ಆ ಹುಡುಗ ಆಕೆಯ ಮಕ್ಕಳನ್ನೂ ಜವಾಬ್ದಾರಿಯಿಂದ ನೋಡಿಕೊಳ್ಳಲು ತಯಾರಿದ್ದರೆ ಆಕೆ ಆ ಹುಡುಗನ ಹಿಂದೆ ಹೋಗುವುದೇ ಸರಿಯಾದುದೆಂದು ನನ್ನ ಅಭಿಪ್ರಾಯ. ಇರುವ ನಾಲ್ಕು ದಿನದಲ್ಲಿ ಇಷ್ಟವಿಲ್ಲದವನ ಜೊತೆ ಬದುಕುವುದಕ್ಕಿಂತ ಧೈರ್ಯವಾಗಿ ನಮಗೆ ಬೇಕಾದಂತೆ ಬದುಕುವ ಪರಿಸ್ಥಿತಿ ನಮ್ಮ ಮಧ್ಯೆ ಎಂದು ಬರುತ್ತದೋ ಗೊತ್ತಿಲ್ಲ. ಬೇಜವಾಬ್ದಾರಿ ಗಂಡಸರಿಗೆ (ಮತ್ತು ಹೆಂಗಸರಿಗೆ) ಸಮಾಜವೆಂಬುದು ಇವತ್ತು ಶ್ರೀರಕ್ಷೆ. ಹೇಗೂ ಸಮಾಜವನ್ನೆದುರಿಸಿ ಬೇರೆಯಾಗಲಾರರು ಎಂಬ ಭಂಡ ಧೈರ್ಯಕ್ಕೆ ಬಿದ್ದು ಜೊತೆಗಿರುವ ಜೀವವನ್ನು ಪ್ರೀತಿಸದೇ, ಗೌರವವಿಲ್ಲದೇ ನೋಡಿಯೂ ಪಾರಾಗಿಬಿಡುತ್ತಾರೆ. ಆಕೆಯ ಸಂತ್ರಸ್ತ ಬದುಕಿಗೆ ನೀವಾಗಲೀ, ನಿಮ್ಮ ಗಂಡನಾಗಲೀ, ಆತ ಕೊಡಿಸಬಹುದಾದ counseling ಆಗಲೀ ಉತ್ತರವಾಗಲಾರದು. (ನೆನಪಿರಲಿ, ಆ ಹುಡುಗ ಹೇಗಿದ್ದಾನೆಂದು ಗೊತ್ತಿಲ್ಲದೇ ಈ ಮಾತನ್ನು ಹೇಳುತ್ತಿದ್ದೇನೆ. ಆತ ಮೊದಲು ನಡೆದುಕೊಂಡ ರೀತಿ ಆತನ ಸ್ವಭಾವಕ್ಕೆ ಮಾನದಂಡವಾಗಲಾರದು. ದೇವರೆನ್ನುವವನಿದ್ದರೆ, ಆ ಹೆಣ್ಣುಮಗಳಿಗೆ ಸ್ವಂತ ನಿರ್ಧಾರಕ್ಕೆ ಬಧ್ಧನಾಗುವ ಧೈರ್ಯ ಕೊಡಲಿ, ಕೊನೆಗೂ ನಿರ್ಧರಿಸಬೇಕಾದದ್ದು ಆಕೆಯೇ)

    ReplyDelete
  17. ಸುಪ್ತವರ್ಣ ಸರ್,
    ನಮ್ಮ ಬ್ಲಾಗಿಗೆ ನಿಮಗೆ ಸ್ವಾಗತ . ನಿಮ್ಮ ಅಭಿಪ್ರಾಯಕ್ಕೂ ಧನ್ಯವಾದಗಳು . ಇಲ್ಲಿ ಆ ಮುಸ್ಲಿಂ ಹುಡುಗ ಒಳ್ಳೆಯವನಿಗಿದ್ದರು ಕೂಡ , ಅವಳ ಮಕ್ಕಳು ಅವನನ್ನು ತಂದೆ ಅಂತ ಒಪ್ಪಿಕೊಳ್ತಾವಾ? ನೀವೇ ಒಂದು ಸಲ ಯೋಚಿಸಿ ನೋಡಿ .ಯಾರು ಎಷ್ಟು ಒಳ್ಳೆವರಗಿರಲಿ ತನ್ನದಲ್ಲದ ಮಕ್ಕಳನ್ನ ಬರಿ ಕರುಣೆ ಇಂದ ನೋಡಿಕೊಳ್ಳಬಹುದು ಆದ್ರೆ ಅವನಿಂದ ಮಕ್ಕಳಿಗೆ ಸಿಗಬೇಕಾದ ತಂದೆ ಪ್ರೀತಿ , ಭದ್ರತೆ ಸಿಗೋಲ್ಲ . ನಿಮ್ಮ ಮಾತಿನಲ್ಲಿಯೂ ಸತ್ಯ ಅಡಗಿದೆ , ಅದನ್ನ ನಾನು ಖಂಡಿತ ಒಪ್ಪಿಕೊಳ್ಳುತೇನೆ . ನಾನು ಹಾಗೂ ನನ್ನ ಪತಿ ಅವಳಿಗೆ ನಮಗೆ ಅನ್ನಿಸಿದ್ದು ಹೇಳಬಹುದು , ಕೌನ್ಸೆಲಿಂಗ್ ಕೊಡಿಸಬಹುದು ಆಮೇಲೆ ನಮ್ಮ ನಮ್ಮ ಮನೆಗೆ ಬಂದು ನಮ್ಮ ಜೀವನದಲ್ಲಿ ವ್ಯಸ್ತವಾಗುತ್ತೇವೆ . ಪ್ರತಿ ದಿನ ಪ್ರತಿ ಗಳಿಗೆ ಅನುಭವಿಸೋಳು ಅವಳು. ನಾನಾಗಲಿ ಮತ್ತೆ ಬೇರೆ ಯಾರಗಲಿ ಅವಳಿಗೆ ಒಬ್ಬ ಜವಾಬ್ದಾರಿ ಗಂಡನ ಸ್ಥಾನನ ತುಂಬೋಕೆ ಆಗೋಲ್ಲ . ಅಂತಿಮ ನಿರ್ಧಾರ ಅವಳೇ ತೊಗೊಳೆಕೆ ಸಾದ್ಯ . ನಂಗು ಗೊತ್ತು ಎಲ್ಲ ಹುಡುಗಿಯಂತೆ ಅವಳು ತನ್ನ ಗಂಡನ ಬಗ್ಗೆ ಕನುಸು ಕಂಡವಳೇ , ಆದ್ರೆ ಅದು ಅವಳಿಗೆ ನನಸಾಗಲಿಲ್ಲ ಅಂತ ನಂಗು ದುಖ ಇದೆ . ಆದ್ರೆ ಅವಳು ಒಂದು ತಪ್ಪು ನಿರ್ಧಾರದಿಂದ ಅವಳಸ್ತೆ ಅಲ್ಲ ಅವಳ ಜೊತೆ ತುಂಬಾ ಜೀವಗಳು ಯಾತನೆ ಅನುಭವಿಸ ಬೇಕಾಗುತ್ತದೆ . ಆದ್ರೆ ಅದು ಒಂದು ಆತುರದ ನಿರ್ಧಾರ ಆಗಿರಬಾರದು . ಇಲ್ಲಿ ರಫೀಕ್ ಗು ಮದುವೆ ಆಗಿದೆ ಅನ್ನೋ ವಿಚಾರ ನಾವು ಮರಿ ಬಾರದು . ಹೌದು ಒಬ್ಬ ವ್ಯಕ್ತಿಗೆ ಮುಕ್ತವಾಗಿ ತನಗೆ ಎದರಲ್ಲಿ ಸಂತೋಷ್ ಇರುತ್ತೆ ಆ ಥರ ಜೀವನ ಮಾಡೋ ವಾತಾವರಣ ನಮ್ಮಲ್ಲಿ ಇಲ್ಲ . ಅವನು/ ಅವಳು ಸಮಾಜದ ಕಟ್ಟಳೆ, ಚೌಕಟ್ಟಿನಲ್ಲಿ ಇರಬೇಕು. ಅದೊಂದು ಸಲ ಬೇಸರದ ಸಂಗತಿ ಆಗುತ್ತೆ . ಆದ್ರೆ ಆ ಚೌಕಟ್ಟು ನಮ್ಮನ ತುಂಬಾ ಸಲ ಉಳಿಸುತ್ತೆ , ಮುಂದೆ ಆಗಬಹುದಾದ್ ಅವಘಡಗಳನ್ನ ತಪ್ಪಿಸುತ್ತೆ , ಅದು ಮಾಡಿರೋದು ಅನುಭವಿಗಳಿಂದ ಅಂತ ಮರಿಬಾರದು ಅಲ್ವಾ ? . ಇವಳೇನೋ ನಾನು ನನ್ನ ಸಂತೋಷ್ ಮುಖ್ಯ ಅಂತ ಹೋಗಿ ತನ್ನ ಕಾಲು ಮೇಲೆ ಕಲ್ಲು ಚಲ್ಲಿಕೋಬಾರದು ನೋಡಿ . ನನ್ನ ಜೀವದ ಗೆಳತಿ ಅವಳು . ಅವಳು ಸಂತೋಷವಾಗಿರಬೇಕು ಅಂತ ಯಾವತ್ತು ಬಯುಸುವಳು ನಾನು . ಅವಳ ಪ್ರತಿನಿತ್ಯ ನೋವು ದುಖಗಳನ್ನ ನನ್ನಲಿ ತೋಡಿ ಕೊಳ್ಳುತಾಳೆ ಅಂದ್ರೆ ನಾನು ಅವಳ ಜೀವನ ಅಸ್ಟು ಹಗುರಾಗಿ consider ಮಾಡೋಕೆ ಆಗೋಲ್ಲ . ಬರಿ ಕೌನ್ಸೆಲಿಂಗ್ ಕೊಟ್ಟು ಅವಳ ಕೈ ಬಿಡೋಕೆ ಆಗೋಲ್ಲ ಅಲ್ವಾ ? ನೋಡೋಣ ಮುಂದೆ ಏನಾಗುತ್ತದೆ .

    ಮನಸಾರೆ

    ReplyDelete
  18. ಮನಸಾರೆಯವರೇ, ನಿಮ್ಮ ಈ ಗೆಳತಿಅಯನ್ನ ನೆನೆಸಿಕೊಂಡರೆ ಕರಳು ಕಿವುಚುತ್ತೆ...ಒಂದಂತೂ ನಿಜ...ಈಕೆ..ಬಹಳ ಭಾವುಕಳು..ಪ್ರೀತಿಗೆ ಸುಲಭದಲ್ಲಿ ಸೋಲುವವಳು...ಮತ್ತು ಭ್ರಮನಿರಸನಕ್ಕೊಳಗಾಗಿರುವಳು...ಇಲ್ಲಿ ಮಾನಸಿಕ ಬಲಹೀನತೆಯೇ ಹೆಚ್ಚು ಕಾಣುತ್ತಿದೆ...ಪ್ರಕಾಶನ ಮಾತು ಅಕ್ಷರಶಃ ಸತ್ಯ..ಮಕ್ಕಳ ಬಾಳು ಡೋಲಾಯಮಾನವಾಗುತ್ತದೆ...ಗಂಡ ಕೆಟ್ಟವನಲ್ಲ ಎನ್ನುವಮಾತು ನಿಮ್ಮ ಗೆಳತಿ ಒಪ್ಪುತ್ತಾಳೆಯಾದ್ದರಿಂದ..ಇಲ್ಲಿ ದ್ವಿಮುಖ ಕೌನ್ಸಲ್ಲಿಂಗ್ ನಡೆದರೆ ಉತ್ತಮ ಎಂದೇ ನನ್ನ ಅನಿಸಿಕೆ. ಚುಕ್ಕಿಚಿತ್ತಾರರ ಮಾತು ಸರಿಯೆನಿಸುತ್ತೆ..Psycho and Psychiatric counselling ಬೆಕಾಗುತ್ತೆ.
    ಇಲ್ಲಿ ಮನೋರೋಗದ ಗೊತ್ತಾದ ಆಸ್ಪತ್ರೆ ನನಗೆ ಸರಿಯೆನಿಸುವುದಿಲ್ಲ ಏಕೆಂದರೆ ಅಲ್ಲಿಗೆ ಕರೆದೊಯ್ದರೆ ಆಕೆಯ ಬಲಹೀನ ಮನಸಿಗೆ ಪೆಟ್ಟು ..ನರ್ಸಿಂಗ್ ಹೋಮ್ ಗೆ ಮನೋವೈದ್ಯರಲ್ಲಿಗೆ ಕರೆದೊಯ್ದರೆ ಒಳಿತು.

    Bangalore Institute of Dental Science (before NIMHANS bus stop) ಗೆ ಮೊದಲು, On Hosur Road one stop before Lakkasandra, there is ABHAYA NURSING home (left side when going towards Lalbagh main gate or right side while going from Lalbagh main gate towards dairy circle) ಅಲ್ಲಿ ಡಾ. ಜಗದೀಶ್ ಎನ್ನುವ (ಅವರ ಕಾರ್ಯ ವೈಖರಿ ಬಹಳ ಪರಿಣಾಮಕಾರಿಯಂತೆ) ಮನೋವೈದ್ಯರಿದ್ದಾರೆ...ಅವರಲ್ಲಿ ಮೊದಲು ಕೂಲಂಕುಶವಾಗಿ ತಿಳಿಸಿ ಆಕೆಯನ್ನೂ ಆಕೆಯ ಪತಿಯನ್ನೂ ಕೌನ್ಸಿಲಿಂಗ್ ಮಾಡಿಸಿದರೆ ಒಳ್ಲೆಯದು...
    ಅವರ ಬಳಿ ಮಾತನಾಡಿ ಮೆಡಿಕೇಶನ್ ಕಂ ಕೌನ್ಸಲಿಂಗ್ ಮೂಲಕ ಪರಿಹಾರ ಹುಡುಕಿಸಬೇಕು....ಇಲ್ಲಿ ರಫೀಕನ ಬಳಿಗೆ ಹೋಗುವ ವಿಚಾರವನ್ನು ಹೇಗಾದರೂ ನಿಮ್ಮ ಗೆಳತಿಯ ಮನಸ್ಸಿಂದ ತೆಗೆದು ಹಾಕಬೇಕಾದ್ದು ಬಹು ಮುಖ್ಯ...ಅದಕ್ಕೆ ಸಾಧ್ಯವಾಗುವ ಹಾಗಿದ್ದರೆ ಅವನಲ್ಲಿ ಹೇಳಿ ನಿಮ್ಮ ಗೆಳತಿಗೆ ಫೋನ್ ಮಾಡದಂತೆ ತಡೆಯಿರಿ...ಇಲ್ಲ ನಿಮ್ಮ ಗೆಳತಿಗೆ ಅವನ ಬಳಿ ಹೋಗುವುದರಿಂದ ಮಕ್ಕಳ ಮೇಲೆ ವಿಪರೀತ ಪರಿಣಾಮ ಆಗುವುದಲ್ಲದೇ ನಿಮ್ಮ ಗೆಳತಿಯ ಭವಿಷ್ಯದ ಬಗ್ಗೆಯೂ ಹೀಗೇ ಎಮ್ದು ಹೇಳಲಾಗದು ಎಂದು ತಿಳಿಸಿ... .. ಮಕ್ಕಳಿರುವ ಕಾರಣ ಮತ್ತು ರಫೀಕ ನಂಬಿಕಸ್ತನೆನ್ನುವ ಯಾವುದೇ ಆಧಾರವಿಲ್ಲದ ಕಾರಣ..ಕೇವಲ ಆಕರ್ಷಣೆಗೆ ಕಟ್ಟುಬಿದ್ದರೆ...ಬದುಕ ಮುಮ್ದೆ ಸಹಿಸಲಸಾಧ್ಯವಾಗಬಹುದು....
    ಇನ್ನು ವಿಚಾರ ವಿಮರ್ಶೆ ಮಾಡಿ ನಿರ್ಧರಿಸಿ....ನಿಮ್ಮ ಗೆಳತಿಗೆ ಶೀಘ್ರ ಆರೋಗ್ಯ ಸುಧಾರಿಸಲಿ ಮತ್ತು ಶುಭವಾಗಲಿ.

    ReplyDelete
  19. Manasaare avare,

    Modalige, nimma gelathiya bagge nimagiruva visheshavaada preethi haagu kaaLaji santasa koduttade...

    Nimma geLathiya vishayadalli nanna prakaara yeradu mukhya vichaaragaLive..

    1. Avaru hinde kaLedukonda preethi haagu adarindaagi avara maneyalli aada avamaanagaLu
    2. Avara gandana bejavabdaaritana mattu idarindaagi besatta avara manassu.

    Eega nanna prakaara agiruvudenendare, avarige matte taanu hindina reethi snehitana preethi sikku, tanage ishtavaadante baalabahudu, annuva anisike.. Aadare avare aagali athava avara geleyanagali hindina reethi illa annodu avarige manavarike aagabekide.. modaligintha eegina avara stithi-gathigalu badalaagive haagu bahala sookshma agive.. yekendare, hindeye maduve aagada geleya, eega baalinuddakku jothegiruvanemba andha-nambike avarige aagiruvanthide...

    nanage tilidavarobbara magalu, heege obba hudugana hinde biddu Engineering exams miss madta idlu. Aaga naanu madiddenendare, avalige nanna mattobba gelathiyinda kelavu avamaanakaravaada ghatanegalannu bannisalu request madide. Aa nanna gelathiyu ide reethiyaagi exams miss madkondanthavalu.

    Neevu nimma gelathige heegenadru madabahudu annisidre adu bahala upayuktavaaga bahudu.. Idarondige yavudadru doctor na kuda consult madodu Olledu...

    Nimma gelathiyu ee trishanku-vininda bega horabarali.. haage nimage mattu nimma kaalaji ge abhinandanegalu...

    ReplyDelete
  20. ಬಹುಷಃ counselling ಬೇಕಾಗಿರುವುದು ನಿಮ್ಮ ಸ್ನೇಹಿತೆಗಲ್ಲ , ಆಕೆಯ ಗಂಡನಿಗೆ . ಮೊದಲು ಆ ಮನುಷ್ಯನಿಗೆ ಕೌನ್ಸೆಲ್ಲಿಂಗ್ ಮಾಡ್ಸಿ ..

    ಯಾವುದೇ ಹೆಣ್ಣು ಅತೀ ಸ್ವತಂತ್ರಳಾಗಿರಲು ಬಯಸುವುದಿಲ್ಲ! ಹೆಣ್ಣಿಗೆ ಯಾವಾಗಲೂ ಒಂದು ಕಂಫರ್ಟಬಲ್ ಆಗಿರೋ ಜೈಲು ಬೇಕು. ಅವಳ ವಾದ, ಜಗಳ, ನಿಲುವು ತೀರ್ಮಾನಗಳು ಅವಳಿರುವ ಜೈಲಿಗೆ ಕಂಫರ್ಟ್ ಒದಗಿಸಲಿಕ್ಕೇ ಹೊರತು ಅವಳಿಗೆ ಸ್ವೇಚ್ಛಾಚಾರದ ವಿಚಾರವೇ ಇರುವುದಿಲ್ಲ . ಆಕೆಗೆ ಇಗಾಗಿರುವ ಮನಸ್ಸಿನ ಭಾವ ಒಂದು ತರಹನಾದ ಚಡಪಡಿಕೆ ... ಈ ಡಿಫ್ರೆನ್ಸಿಯೇಶನ್ನು ಅವಳಿಗೆ ಒಂದು ತರಹ ವಿಚಿತ್ರ ಖುಷಿ ಕೊಡಬಹುದು

    ಎಲ್ಲೋ ಒಮ್ಮೆ ಓದಿದ ನೆನಪು " If persons are to be completely honest to each other as well as to themselves, it is extremely important that they do not keep secrets from each other..
    That condition is the beginning of self discovery. That is where you find out who you truly are"

    ReplyDelete
  21. Manasaare

    olleya baraha

    heluvudannella ellaroo heli mugisiddaare :)

    nammadu kevala haaraisuvudu eaga :)

    ReplyDelete
  22. ಜಲನಯನ್ ಸಾರ್ ,

    ನಿಮ್ಮ ತಡವಾದ್ ಅಭಿಪ್ರಾಯಕ್ಕೆ ನಮ್ಮ ಧನ್ಯವಾದಗಳು :) . ನಮ್ಮ ಬ್ಲಾಗ್ ನಿಮ್ಮ ಅಭಿಪ್ರಾಯಕ್ಕೆ ಕಾಯ್ತಾ ಇರುತ್ತೆ ಅಂತ ಮರಿಬೇಡಿ . ನೀವು ಕೊಟ್ಟ ಡಾಕ್ಟರ ಮಾಹಿತಿಗೆ ತುಂಬಾ ತುಂಬಾ ನೆ ಧನ್ಯವಾದ . ನೀವು ಹೇಳಿದ ಹಾಗೆ ಮನೋರೋಗದ ಆಸ್ಪತ್ರೆ ಕಿಂತ ನರ್ಸಿಂಗ್ ಹೋಂ ಗೆ ಕರೆದೊಯ್ದರೆ ಉತ್ತಮ . ಅದಕ್ಕಿಂತ್ ಮೊದಲು ಮೇಲೆ ಹೇಳಿದ ಕೆಲವು ಸಲಹೆಗಳಿಂದ ಏನಾದ್ರೂ ಬದಲಾವಣೆ ಆಗುತ್ತ ನೋಡುತ್ತೀನಿ . ಅವಳು ಅತ್ಯಂತ ಭಾವುಕ , ಹಾಗೂ ಪ್ರೀತಿಗೆ ಸುಲಭವಾಗಿ ಸೋಲುವಳು ಅಂತ ನಿಮಗೆ ಹೇಗೆ ಗೊತ್ತಾಯ್ತು ? ನಿಜ ಅವಳು ಭಾವುಕಳು , ಎಲ್ಲರಿಗಾಗಿ ಪ್ರೀತಿ ತುಂಬಿದ ಹೃದಯ ಅವಳದು . ಕಲಾವಿದಳು ಅದಕ್ಕೆ ಇರಬೇಕು ಭಾವುಕತೆ ತುಂಬಿದೆ ಅಂತ .
    ರಫೀಕ್ ಜೊತೆ ಮಾತಾಡುವ ಸಲಹೆ ಒಳ್ಳೇದು , ನೋಡೋಣ . ಅವನ ಫೋನ್ ನಂಬರ್ ಅವಳ ಹತ್ರ ನೆ ಕೇಳಬೇಕು . ಪಿ . ಯು ಕಾಲೇಜ್ ನಲ್ಲಿ ನಾನು ಅವಳು ಒಟ್ಟಿಗೆ ಓದುತ್ತಿದ್ದಗ್ , ಅವಳು ಹಾಗೂ ಅವನ್ ಬಗ್ಗೆ ಗೊತ್ತಿತ್ತು . ಆದ್ರೆ ನಾನು ಒಮ್ಮೆಯೂ ಅವನನ್ನ ನೋಡಿಲ್ಲ . ಮಾತಾಡುವದು ಹೇಗೆ ಗೊತ್ತಿಲ್ಲ . Nann ಪತಿಗೆ ಹೇಳಿ ನೋಡ್ತೀನಿ .
    ಈ ವಿಚಾರ ಅವಳು ನಂಗೆ ಹೇಳಿ ೬ ತಿಂಗಳಾಯಿತು . ಅವಳು ಹುಬ್ಬಳಿ ಯಲ್ಲಿ ಇದ್ದಿದುರಿಂದ ಇಲ್ಲಿವರೆಗಿನ ಅವಳ ಹಾಗೂ ಅವನ ಬಗ್ಗೆ ಬರಿ ಫೋನ್ ನಲ್ಲೆ ನಬ್ಬಿರ ಮಾತು ಕತೆ ಆಗಿದೆ . ಈ ವಿಷಯವಾಗಿ ಸುಮಾರು ಸಲ ನಬ್ಬಿಬರ್ ಗೆಳೆತನ ಅಲ್ಲಿ ಇಲ್ಲಿ weak ಆಗಿದ್ ಅನುಭವನು ಆಗಿದೆ . ಆದ್ರೆ ಇತ್ತಿಚಿಕೆ ಅವಳಿಗೆ ಕಾಂಫಿದೆನ್ಚೆ ಇಲ್ಲ . ವಾರದಲ್ಲಿ ೨ ಬಾರಿ ಆದರು ಸುಮ್ಮನೆ ಅಳುತ್ತಲೇ . ಒಮ್ಮೊಮ್ಮೆ ಗಾಭರಿ ಹುಟ್ಟಿಸುತ್ತೆ .
    ನೋಡೋಣ ಸರ್ ನಮ್ಮ ನಿಮ್ಮೆಲ್ಲರ್ ಹಾರೈಕೆ ಇಂದ ಇದು ಸರಿ ಆದ್ರೆ ಸಾಕು

    ಮನಸಾರೆ

    ReplyDelete
  23. ರಮೇಶ್ ಅವರೇ,
    ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು . ಅವಳು ನಾನು ಬರಿ ಒಂದುವರೆ ವರ್ಷ ಕೂಡಿ ಕಲಿತಿದ್ದರು ಕೂಡ ನಾವಿಬ್ಬರು ತುಂಬಾ ಕ್ಲೋಸ್ ಫ್ರೆಂಡ್ಸ್ . ನೀವು ಹೇಳಿದ ಹಾಗೆ ಅವಳು ಈಗಿನ ಪರಿಸ್ತಿತಿ ಅನುಸರಿಸಿಕೊಂಡು ಹೋದರೆ ಎಲ್ಲರಿಗು ಹಿತ .

    ಮನಸಾರೆ

    ReplyDelete
  24. 'Manasaare'-

    ಕಥಾ ನಾಯಕಿಯ ಮನಸ್ಸು ತುಂಬಾ ಇಕ್ಕಟ್ಟಿನಲ್ಲಿದೆ..
    ದಿನಕರ ಅವರು ಎಲ್ಲವನ್ನು ಸವಿವರವಾಗಿ ಹೇಳಿದ್ದಾರೆ,ಹಾಗೇ ಮಾಡಿ...

    ನಿಮ್ಮದೇ ನಿರೀಕ್ಷೆಯಲ್ಲಿ..: http://manasinamane.blogspot.com/

    ReplyDelete
  25. ಮನಸಾರೆ ಮೇಡಂ,
    ತುಂಬಾ ಗಂಬೀರವಾಗಿ ಇಲ್ಲಿನ ಅನಿಸಿಕೆಗಳನ್ನು ದಿನಾಲು ಓದುತ್ತಿದ್ದೇನೆ..... ಆಜಾದ್ ಸರ್ ಹೇಳಿದ ಹಾಗೆ , ರಫ್ಹೀಕ್ ನ ಹತ್ತಿರ ಮಾತಾಡಿ ನೋಡಿ..... ತುಂಬಾ ಕೂಲ್ ಆಗಿ ಮಾತಾಡಿ, ...... ನಿಜವಾದ ಪ್ರೀತಿ ಇರೋದು, ಇನ್ನೊಬ್ಬರ ಒಳ್ಳೆಯದು ಹಾರೈಸುವುದರಲ್ಲಿ....... ಆತನಿಗೆ , ನಿಮ್ಮ ಗೆಳತಿಯ ಆಶಯ ಬಯಸುವುದೇ ಆಗಿದ್ದಲ್ಲಿ, ಆತ ನಮ್ಮೆಲ್ಲರ ಹಾರೈಕೆಯ ಹಾಗೆ ಈಕೆಯನ್ನು ಬಿಟ್ಟು, ತನ್ನ ಸಂಸಾರವನ್ನೂ ಚೆನ್ನಾಗಿ ನೋಡಿಕೊಂಡು ಇರುತ್ತಾನೆ....... ಈಗ ಹೇಗಿದ್ದರೂ ಬೇಸಿಗೆ ರಜೆ ಮಕ್ಕಳಿಗೆ...... ನಿಮ್ಮ ಮನೆಗ ಗೆಳತಿ ಮಕ್ಕಳನ್ನು ಕರೆಸಿಕೊಂಡು ಮಾತಾಡಿ, ಅವರ ಅನುಮತಿ ಇದ್ದಾರೆ ಡಾಕ್ಟರ ಚಿಕಿತ್ಸೆ ಕೊಡಿಸಿ..... ನನ್ನನ್ನು ನಾನು ಸರಿ ಮಾಡಿಕೊಳ್ಳುತ್ತೇನೆ ಎನ್ನುವುದಾದರೆ ಡಾಕ್ಟರ ಬೇಕಾಗಲ್ಲ ಆಲ್ವಾ ಮೇಡಂ, ...... ನಿಜವಾದ ಪ್ರೀತಿಯ ಸುಖ ತ್ಯಾಗದಲ್ಲಿದೆ ಅಂತಾರೆ...... ನೋಡೋಣ...... ರಫೀಕ್ ಮತ್ತು ನಿಮ್ಮ ಗೆಳತಿ ಇಬ್ಬರೂ ತ್ಯಾಗ ಮಾಡಿ ತಮ್ಮ ತಮ್ಮ ಸಂಸಾರದಲ್ಲೇ ಮುಂದುವರಿದರೆ ಎಲ್ಲರಿಗೂ ಒಳ್ಳೆಯದು..... hoping ಫಾರ್ ದಿ ಬೆಸ್ಟ್...

    ReplyDelete
  26. ಮನಸಾರೆಯವರೆ,
    ನಿಮ್ಮ ಗೆಳತಿ ತು೦ಬಾ ನಾಜೂಕಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.ಅವರಿಗೆ ಚುಕ್ಕಿಚಿತ್ತಾರದವರು ಸೂಚಿಸಿದ೦ತೆ ಮಾನಸಿಕ ತಜ್ನರ ಬಳಿ ಸಲಹೆ ಕೇಳುವುದೇ ಉತ್ತಮ ಎನಿಸುತ್ತದೆ.ಯಾವುದೇ ಕಾರಣದಿ೦ದ ಅದು ಸಾಧ್ಯವಾಗದೇ ಹೊದರೆ ಆರ್ಟ್ ಆಫ್ ಲಿವಿ೦ಗ್ ನ೦ತಹ ಯಾವುದಾದರೂ Spiritual courses ಮಾಡಿದರೆ ಕೂಡಾ ಅನುಕೂಲವಾಗಬುಹುದು ಎ೦ದು ನನಗನ್ನಿಸುತ್ತದೆ.ಅವುಗಳಲ್ಲಿ ಜೀವನಕ್ಕೆ ಸರಿಯಾದ ಮಾರ್ಗ ದರ್ಶನ ಸಿಗುತ್ತದೆ.ಪ್ರಾಣಾಯಾಮ ಧ್ಯಾನಗಳಿ೦ದ ಖಿನ್ನತೆ ದೂರವಾಗುತ್ತದೆ.ಈನಿಟ್ಟಿನಲ್ಲಿ ಒಮ್ಮೆ ಆಲೋಚಿಸಿ ನೋಡಿ.
    ಯಾವುದಾದರು ಮಾರ್ಗದಿ೦ದ ನಿಮ್ಮ ಗೆಳತಿ ಸಮಸ್ಯೆಯಿ೦ದ ದೂರವಾಗಿ ತನ್ನ ಸ೦ಸಾರ ಸರಿಯಾಗಿ ನೋಡಿಕೊ೦ಡು ಸುಖವಾಗಿ ಬಾಳಲಿ ಎ೦ದು ಹಾರೈಸುತ್ತೇನೆ.

    ReplyDelete
  27. ಸಂತೋಷ್ ಸರ್,
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು . ನಮ್ಮ ಬ್ಲಾಗ್ಗೆ ನಿಮಗೆ ಸ್ವಾಗತ . ನಿಮ್ಮ ಹಾಗೂ ಚಿತ್ರ ಮೇಡಂ ಬಗ್ಗೆ ಪ್ರಕಾಶಣ್ಣನ ಬ್ಲಾಗ್ ನಲ್ಲಿ ಓದಿದ್ದೆ . ನಿಮ್ಮ ಇಬ್ಬರಿಗೂ ನನ್ನ ಶುಭ ಹಾರೈಕೆಗಳು . ಇನ್ನು ನಮ್ಮ ವಿಷಯಕ್ಕೆ ಬರೋಣ.
    ಹೆಣ್ಣಿಗೆ ಯಾವಾಗಲೂ ಒಂದು ಕಂಫರ್ಟಬಲ್ ಆಗಿರೋ ಜೈಲು ಬೇಕು ನಿಮ್ಮ ವಿಚಾರ ತಕ್ಕ್ ಮಟ್ಟಿಗೆ ಸರಿಯಾಗಿದೆ . ಇಲ್ಲಿ ಅವಳ ಸ್ವೇಚ್ಚೆಕಾರಕ್ಕೆ ಯಾರು ನಿರ್ಭಂದನೆ ಹಾಕಿಲ್ಲ . ಹ್ಹಾ ಅವಳು ಹೊರಗಡೆ ಕೆಲಸಕ್ಕೆ ಹೋಗಕ್ಕೆ ಮನೆ ಹಿರಿಯರ ಅನುಮತಿ ಇಲ್ಲ . ಅವರ ಪ್ರಕಾರ್ ಅದು ಅವಳಿಗೆ ಅನಾವಶ್ಯಕ್ . ಗಂಡ ಕೆಟ್ಟವನಲ್ಲ , ಇವಳಿಗೆ ಏನು ತೊಂದರೆ ಕೊಡಲ್ಲ . ಆದ್ರೆ ಜವಾಬ್ದಾರಿ ಇಲ್ಲ ಅಸ್ಟೆ . ಅದು ಈಗ ಹೆಮ್ಮರವಾಗಿದೆ . ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?
    ಹೆಂಡತಿ , ಮಕ್ಕಳ ಮನೆ ಜವಾಬ್ದಾರಿ ಇಲ್ಲದವನಿಗೆ ಯಾವ್ ಕೌನ್ಸಿಲಿಂಗ್ ಹೆಲ್ಪ್ ಮಾಡುತ್ತೆ ಹೇಳಿ .

    ಮನಸಾರೆ

    ReplyDelete
  28. ಗುರುಮೂರ್ತಿ ( ಸಾಗರದಾಚೆ ಇಂಚರ್) , ಗುರುದೆಸೆ , ಮನಮುಕ್ತ ಹಾಗೋ ಮತ್ತೊಮ್ಮೆ ದಿನಕರ್ ಸರ್ ಅವರಿಗೆ ಧನ್ಯವಾದಗಳು .

    @ ದಿನಕರ್ ಸರ್ ,
    ಯಾರೋ ಗೊತ್ತಿಲ್ಲದವರ್ ಬಗ್ಗೆ ಓದಿ ಅವರ ಬಗ್ಗೆ ನೀವು ತೋರುತ್ತಿರುವ ಕಾಳಜಿ ಶ್ಲಾಗನಿಯ . ನಿಜವಾಗಿಯೂ ನಾನು ಸಹ ಒಂದು ಸಲ ಓದಿ , ಒಂದು ತಿಳಿದ್ದಿದ್ದು ಹೇಳಿ ಆ ಬಗ್ಗೆ ಮರೆತೇ ಬಿಡ್ತಿದ್ದೆ . ಆದ್ರೆ ನಿಮ್ಮದು ತುಂಬಾ ಕರುಣಾಮಯಿ ಹೃದಯ , ಇನ್ನೊಬ್ಬರ ಅದು ತಮಗೆ ಸಂಬಧವೆ ಇಲ್ಲದವರ್ ಬಗ್ಗೆ ನೀವು ಕೊಡುತ್ತಿರುವ ಕಾಳಜಿಪೂರ್ವಕ್ ಸಲಹೆಗಳಿಗೆ ಮಾನವೀಯತೆ ಎತ್ತಿ ತೋರಿಸುತ್ತೆ . ನೀವು ಹಾಗೂ ನಮ್ಮ ಜಲನಯನ್ ಸಾರ್ ಹೇಳಿದ ಹಾಗೆ ರಫೀಕ್ ಜೊತೆ ನಾನು ಇಲ್ಲವೇ ನಮ್ಮ ಯಜಮಾನರು ಮಾತಾಡೋ ಬಗ್ಗೆ ಯೋಚಿಸಿತಿವಿ . ನಂಗು ಅವಳಿಗೆ ಡಾಕ್ಟರ ಹತ್ರ ಕರೆದು ಕೊಂಡು ಹೋಗುವದು ಸರಿ ಅನ್ನಿಸ್ತ ಇಲ್ಲ . ಮೊದಲು ನಮ್ಮ ಕೈಲಿ ಏನಾಗುತ್ತೆ ಅದನ್ನ ಪ್ರಯತ್ನ ಮಾಡೋಣ , ಆಮೇಲೆ ಇನ್ನು ಇದು ಜಾಸ್ತಿ ಆದ್ರೆ ಖಂಡಿತ ತಜ್ಞರ ಸಲಹೆ ಕೇಳೋಣ .

    @ ಮನಮುಕ್ತ
    ನೀವು ಹೇಳಿದ ಸಲಹೆ ತುಂಬಾ ಸೂಕ್ತ ಹಾಗೂ ತುಂಬಾ ಸಹಾಯವಾಗಬಹುದು . ಅವಳಿಗೆ ಆರ್ಟ್ ಆಫ್ ಲಿವಿಂಗ್ ಕೋರ್ಸ್ ಸೇರಿಕೊಳ್ಳಲಿಕ್ಕೆ ಸಾಧ್ಯ ಆಗೋತ್ತೋ ಇಲ್ವೋ ನೋಡ್ಬೇಕು . ಅವಳ ಮನೇಲಿ ಎಲ್ಲದಕ್ಕೂ ಅತ್ತೆ ಹಾಗೂ ದೊಡ್ಡ ನೆಗ್ಯನಿ ಅನುಮತಿ ಬೇಕು . ಅವರು ಇಷ್ಟು ದೂರ ಬೆಂಗಳೂರಿಗೆ ಕಲಿಹಿಸೋ ಸಾದ್ಯತೆ ಕಡಿಮೆ . ಆದ್ರೆ ಖಂಡಿತ ಅವಳಿಗೆ ಪ್ರಾಣಾಯಾಮ , ಮನಸ್ಸೇ ರೆಲಕ್ಷ ಪ್ಲೀಸ್ ಅಂತ ಬುಕ್ ಮತ್ತು ಸಿಡಿ ಕಳುಹಿಸಿ ಕೊಡಬೇಕು. ಅವಳು ಇಲ್ಲಿದೆ ಬಂದಾಗ್ ಆ ಥರ ಯಾವುದಾದರು ಕೋರ್ಸ್ ಇದೆ ಅಂತ ನೋಡ್ತೀನಿ .

    ಮನಸಾರೆ

    ReplyDelete
  29. ಮನಸಾರೆ ಅವರೇ,

    ನಿಮ್ಮ ಗೆಳತಿಯ ಬಗ್ಗೆ ಬರೆದಿರುವ ಲೇಖನವನ್ನ ಓದಿದ ನಂತರ ನಿಮ್ಮ ಉಳಿದ
    ಲೇಖನಗಳನ್ನ ಓದಿದೆ. In fact , ಹೇಳುವುದಾದರೆ ಈ ಸಮಸ್ಯೆಗೆ ನಿಮ್ಮ
    ಬ್ಲೋಗ್ನಲ್ಲಿಯೇ ನನಗೆ ಒಂದು ಪರಿಹಾರ ಕಾಣಿಸುತ್ತಿದೆ. ನೀವು ನಿಮ್ಮ ಲೇಖನಗಳನ್ನ
    ಬರೆಯುವಾಗ ನಿಮ್ಮ ಮನಸ್ಥಿತಿ ಹಾಗು ಉದ್ದೇಶವನ್ನ ಒಮ್ಮೆ ನೆನಪಿಸಿಕೊಳ್ಳಿ.

    ಈಗಾಗಲೇ ನಿಮ್ಮ ಗೆಳತಿ ಸಾಕಷ್ಟು ಮಟ್ಟಿಗೆ ಕುಸಿದು ಹೋಗಿದ್ದಾರೆ (ನೀವು ಬಣ್ಣಿಸಿದ
    ಪ್ರಕಾರವಾಗಿ). ವಿಮರ್ಶೆ ಹಾಗು ಸಹಾನುಭೂತಿಯಿಂದ ಯಾವ ಲಾಭವೂ ಸಿಗದು.
    ನೀವು ನಿಮ್ಮ husband ಜೊತೆಯಲ್ಲಿ ನಾನು ಹೇಳಿದ ಬಗ್ಗೆ ಒಮ್ಮೆ ಚರ್ಚೆ ಮಾಡಿ.
    ಬಹುಶ್ಯಃ ನಿಮಗೇ ಸುಲಭವಾಗಿ ಪರಿಹಾರ ಹೊಳೆಯುತ್ತದೆ. ನನ್ನ ಮನಸ್ಸಲಿದ್ದದ್ದನ್ನು
    ನಿಮ್ಮ ಪ್ರತಿಕ್ರಿಯೆ ನೋಡಿ ತಿಳಿಸುತ್ತೇನೆ.

    ಮನದಿಂಚರ

    ReplyDelete
  30. ಮನದಿಂಚರ ಅವರೇ ( ಸರ್ ಅನ್ನಬೇಕೋ , ಮೇಡಂ ಅನ್ನಬೇಕೋ ಗೊತ್ತಿಲ್ಲ :) ) ,
    ನಮ್ಮ ಬ್ಲಾಗ್ ಗೆ ಸ್ವಾಗತ್ ಹಾಗೂ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು . ಮನದಿಂಚರಾ ನಿಜಕ್ಕೂ ಸುಂದರವಾದ ಹೆಸರು , ಆದ್ರೆ ನಿಮ್ಮ ಬ್ಲಾಗ್ ಖಾಲಿ ಇದ್ದಿದ್ದು ನೋಡಿ ಬೇಸರವಾಯಿತು , ನಿಮ್ಮ ಬ್ಲಾಗ್ ನಲ್ಲಿ ಬೇಗ ನಿಮ್ಮ ಮನದ ಕಂಪನಗಳು ಅಲೆಯೇಬ್ಬಿಸಲಿ , ಓದಲು ನಾವಿದ್ದೇವೆ .
    ನನ್ನ ಲೇಖನದಲ್ಲೇ ಇದಕ್ಕೆ ಪರಿಹಾರ ಇದೆ ಅಂತಿರಿ , ಆದ್ರೆ ನಂಗೆ ಅರ್ಥ ಆಗ್ತಾ ಇಲ್ಲ . ನನ್ನ ಈ ಲೇಖನದಲ್ಲಾ ? ಇಲ್ಲ ಹಳೆ ಲೇಖನದಲ್ಲಾ? ಈ ಲೇಖನ ಅಂತು ಅವಳು ನಂಗೆ ವಿವರಿಸಿದ ಮನಸ್ಥಿತಿ ಯನ್ನ ಬರಿದಿದ್ದಿನಿ . ಹಳೆ ಲೇಖನಗಳು ಅಂದ್ರೆ ಕಾಲೇಜ್ ದಿನಗಳು ಅಲ್ವಾ ? ಅದು ಒಂದು ಜೋಶ ತುಂಬಿದ ದಿನಗಳ ನೆನಪಿನ ಮಾಲೆ ಅಸ್ಟೆ . ಪ್ಲೀಸ್ ನಂಗೆ ವಿವರವಾಗಿ ಹೇಳ್ತಿರಾ ? ಹೇಗೆ ನನ್ನ ಲೇಖನದಲ್ಲೇ ಪರಿಹಾರ ಇದೆ ಅಂತ ಅರ್ಥ ಆಗ್ತಿಲ್ಲ .


    ಮನಸಾರೆ

    ReplyDelete
  31. ಮನಸಾರೆ ..ಅವ್ರೆ
    ನಿಮ್ಮ ಈ ಬರಹ ಓದಿ ನಿಜಕ್ಕೂ ಮನಸಿಗೆ ಬೇಜಾರಾಯಿತು. ನಿಮ್ಮ ಗೆಳತಿಯ ಸ್ಥಿತಿಗೆ ತುಂಬಾ ಬೇಜಾರಾಗ್ತಾ ಇದೆ. ನಾನು ಸಲಹೆ ಕೊಡುವಷ್ಟು ದೊಡ್ಡವಳಲ್ಲ. ಹಿರಿಯರೆಲ್ಲ ಇಲ್ಲಿ ಒಳ್ಳೊಳ್ಳೆ ಸಲಹೆಗಳನ್ನೇ ಕೊಟ್ಟಿದ್ದಾರೆ. ಆದರೆ ನನಗೆ ಅನಿಸುವ ಕೆಲ ಅಭಿಪ್ರಾಯಗಳನ್ನು ಹೇಳಬಯಸುತ್ತೇನೆ. ಮದುವೆಗೆ ಮುಂಚೆ ತನ್ನ ಮನೆಯನ್ನೇ ಬಿಟ್ಟು ಬಳಿಗೆ ಹೋದಾಗ ಕಷ್ಟದಲ್ಲಿ ಕೈ ಬಿಟ್ಟಾತ ಅವಳನ್ನು ಪ್ರೀತಿಸುತ್ತಾನೆ ಅಂತ ನನ್ನ ಮನಸ್ಸಿಗೆ ಅನಿಸುವುದೇ ಇಲ್ಲ. ಆಗ ನೋವು , ಅವಮಾನಗಳನ್ನು ಅನುಭವಿಸಿದ್ದು ನಿಮ್ಮ ಗೆಳತಿಯೇ, ಅವನಲ್ಲ. ಈಗಿನ ವಿಷಯವೇನಾದರೂ ಬಹಿರಂಗವಾದರೆ ನೋವು, ಕಷ್ಟ , ಅವಮಾನಗಳನ್ನು ಅನುಭವಿಸುವುದು ನಿಮ್ಮ ಗೆಳತಿಯೇ , ಅವನಲ್ಲ. ಆದರಿಂದ ನಿಮ್ಮ ಗೆಳತಿ ಅವನ ಬಗ್ಗೆ ಒಳ್ಳೆಯ ಭಾವನೆಗಳನ್ನು ಮತ್ತೆ ಮೂಡಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ನನ್ನ ಭಾವನೆ. ಈ ಪ್ರೀತಿ , ಪ್ರೇಮ , ಇವುಗಳನ್ನು ಬಿಟ್ಟು ಜೀವನವನ್ನು ಆನಂದಿಸಲು ಇನ್ನೂ ತುಂಬಾ ವಿಷಯಗಳಿವೆ ಎಂದು ನಿಮ್ಮ ಗೆಳತಿಗೆ ಅರಿಕೆಯಾಗುವುದು ಮುಖ್ಯ. ನೀವು ಹೇಳಿದಂತೆ ಆಕೆ ಚೆನ್ನಾಗಿ ಹಾಡುತ್ತಾರಾದರೆ ..ಅದರಲ್ಲಿ ಸಿಗುವಷ್ಟು ಖುಷಿ ಬೇರೆ ಎನಿದೆ ಅಲ್ವ...? ಹಾಡುಗಾರಿಕೆಯಂಥ ಪ್ರತಿಭೆಯನ್ನು ಎಲ್ಲರೂ ಪಡೆದುಕೊಂಡು ಬಂದಿರುವುದಿಲ್ಲ ಅಲ್ವ..?
    ನಾನೂ ಕೂಡ ಇಂಥದೇ ಒಂದು ಕಥೆಯನ್ನು ಬರೆದಿದ್ದೇನೆ. ಯಂಡಮೂರಿಯವರ ಒಂದು ಕಾದಂಬರಿಯಿಂದ ಪ್ರೇರೇಪಿತಗೊಂಡು ಒಂದು ಪ್ರಯತ್ನ ಮಾಡಿದ್ದೇನೆ. ಆದರೆ ನಿಮ್ಮ ಈ ನೈಜ ಕಥೆಯನ್ನು ಓದಿ ಮನಸ್ಸಿಗೆ ತುಂಬಾ ಖೇಧವೆನಿಸಿತು.

    ReplyDelete
  32. ಮನಸಾರೆ ಅವರೇ,

    ಒಂದ್ ವೇಳೆ ನಿಮ್ಮಂಥಹ outgoing ಆಗಿರುವ ವ್ಯಕ್ತಿಗೆ ಅರ್ದ ಇಂಚ್ ಸೋಡಾ ಹಾಕಿಕೊಂಡು ಪುಸ್ತಕ ಜ್ಞಾನ ಬಿಟ್ಟು ಪ್ರಪಂಚಜ್ಞಾನವೇ ಅರಿಯದ ದಾಸಯ್ಯನೊಡನೆ ವಿವಾಹ ಆಗಿದ್ದಾದರೆ ನಿಮ್ಮ ಪರೀಸ್ಥಿತಿ ಹೇಗಿರುತ್ತಿತ್ತು ಎಂದು ಒಮ್ಮೆ ಯೋಚಿಸಿ.... ಆತ ಎಷ್ಟೇ ಸಂಭಾವಿತ ಅಥವಾ ಒಳ್ಳೆಯ ಗುಣ ಹೊಂದಿದ್ದರೂ ಸಹ, ನೆನೆಸಿಕೊಂಡರೆ ಮೈಯೆಲ್ಲಾ ಜುಮ್ಮೆನ್ನುತ್ತೆ ಅಲ್ವಾ?

    ನಾ ಹೇಳಿದ ಹಾಗೆ ನಿಮ್ಮ ಲೇಖನಗಳಿಂದನೇ ನನಗೆ ಒಂದು ಪರಿಹಾರ ಕಂಡು ಬಂತು. ನೀವು Give me another chance, I wanna grow up once again ಅಂತ ಪರಿತಪಿಸ್ತಾ ಇದ್ದಿದ್ದಾದ್ರು ಯಾಕೆ? ನಿಮ್ಮ ಬಾಲ್ಯ ಸ್ನೇಹಿತರು ಹಾಗು ನಿಮ್ಮ ಪ್ರಿಯತಮನ (ಮುಖ್ಯವಾಗಿ "ನಿಮ್ಮ chemistry " ಗೆ ಹೊಂದುವಂಥಹ) ಜೊತೆಗೆ ಕಳೆದಿರುವ ಕ್ಷಣಗಳನ್ನು ಮನಸ್ಸಿನಲ್ಲೇ ಅವಲೋಕಿಸಿ ಆನಂದ ಪಡೆಯೋಣ ಅಂತ ಅಲ್ಲವೇ? ನೀವು lucky ಆಗಿದ್ದರಿಂದಾಗಿ ನಿಮಗೆ ಜೀವನಪರ್ಯಂತ ನಿಮ್ಮ ಆಲೋಚನೆ ಹಾಗು ಭಾವನೆಗೆ ಸ್ಪಂದಿಸುವ ಅಥವಾ "resonate " ಆಗುವ ಸಂಗಾತಿ ನಿಮಗೆ ಸಿಕ್ಕಿರುತ್ತಾರೆ. ನಿಮ್ಮ ಆ ದಿನಗಳ ಕ್ಷಣಗಳನ್ನು ಹಂಚಿಕೊಳ್ಳಲು ನಿಮ್ಮ ಪತಿಯ ಜೊತೆ, ಈ ರೀತಿಯಾದ ಅಂತರ್ಜಾಲ ಮಾಧ್ಯಮಗಳಿವೆ, ಮತ್ತೆ ನಿಮ್ಮಂಥಹ ಬಿಂದಾಸ್ ಆಗಿರುವ ಫ್ರೆಂಡ್ಸ್-ಸರ್ಕಲ್ ನಿಮ್ಮ ಸುತ್ತಲೂ ಇರುವುಧು ಖಚಿತ. ನೋಡಿ, ನೀವು ಮುಖನೇ ನೋಡದಿರುವ ಜನರ comment ನಿಂದಾಗಿ ಎಷ್ಟೊಂದು ಸಂತಸದ ಆಹ್ಲಾದ ಪಡೆಯುತ್ತಿದ್ದೀರ ಅಂತ!
    cont'd..

    ReplyDelete
  33. ..cont'd
    ನಿಮಗಾದರೆ ನಿಮಗಿಷ್ಟಕರವಾದ ಭಾವನೆಗಳನ್ನು ಹಂಚಿಕೊಳ್ಳಲು ಎಷ್ಟೊಂದು ಮಾರ್ಗಗಳಿವೆ. ಆದರೆ ನಿಮ್ಮ ಗೆಳತಿ ಇದೆಲ್ಲರಿಂದಲೂ ವಂಚಿತಗೊಂಡಿದ್ದಾರೆ ಎಂಬುದು ಕಹಿ ಸತ್ಯ ತಾನೆ? ಆಕೆಯ ಭಾವನೆಗಳನ್ನ ಸ್ಪಂದಿಸಲು, ಅಥವಾ ಹಂಚಿಕೊಳ್ಳಲು ಯಾವ ಮಾರ್ಗ ತಾನೇ ಇದೆ, ನೀವೇ ಒಮ್ಮೆ ಯೋಚಿಸಿ ನೋಡೋಣ? ಮನೆಯಲ್ಲಿ ಇಂಟರ್ನೆಟ್, ಇಮೇಲ್, ಯಾವ ಸೌಲಭ್ಯನೂ ಇಲ್ಲ ಅಂತಾಯ್ತು. ನೀವು ಒಂದು ಗೆಳತಿಯಾಗಿ ಆಕೆಯ ಜೊತೆ ರಸಿಕತೆಯನ್ನ ಹಂಚಿಕೊಳ್ಳಲು ಸಾಧ್ಯವೇ? ಖಂಡಿತ ಇಲ್ಲ. ಹೆಚ್ಚೆಂದರೆ ನೀವು ಅವರನ್ನ console ಮಾಡಬಹುದು, ಅಥವಾ ಲೋಕಾನೀತಿ ವಿಚಾರಗಳನ್ನ ಮಾತನಾಡಿಕೊಳ್ಳಬಹುದು. ಒಂದು ವೇಳೆ ಒಂದು ಗಂಡು ಹೆಣ್ಣು ನಡುವೆ ರಸಿಕತೆ ಎಂಬ element ಇಲ್ಲವಾದಲ್ಲಿ, ಒಂದು ಸ್ವಾರಸ್ಯಮಯ ಜೀವನ ಸಾಧ್ಯವೇ? ಇಲ್ಲಿ ರಸಿಕತೆ ಅಂದರೆ sexual ದೃಷ್ಟಿಯಲ್ಲಿ ನಾ ಹೇಳಲಿಲ್ಲ.. ಅದರ ಗಾಢ ಅರ್ಥ ನಿಮಗೆ ತಿಳಿದಿರುತ್ತದೆ.

    ನಿಮ್ಮ ಗೆಳತಿ ಒಂದು "boring " ಲೈಫಿಗೆ "resistance " ತೋರಿಸ್ತಾ ಇದ್ದಾರೆ. ನಾ ಶುರುವಿನಲ್ಲಿ example ಕೊಟ್ಟಿರುವ ಹಾಗೆ, ಈಕೆಗೂ ಸಹ ಅದೇ ರೀತಿಯಾದ ಸಂದರ್ಭ ಬಂದಿದೆಯೆಂದು ನನ್ನ ಅಭಿಪ್ರಾಯ. ಹೋಗಿ ಹೋಗಿ ಆಕೆಗೆ psychiatrist ಹತ್ತಿರ ಕರೆದುಕೊಂಡು ಹೋಗಬೇಕು ಅಂತ ಯಾವ "ಕ್ರೂರ ಮನಸ್ಸಿನಿಂದ" ಜನ ನಿರ್ಧರಿಸುತ್ತಾ ಇದ್ದರೋ ನಾ ಅರಿಯೆ. ಹೇಳೋದಾದ್ರೆ, ಈ ಆಧುನಿಕ ಜೀವನ ಶೈಲಿಯಲ್ಲಿ ನಾವು ವಾಸ್ತವದಿಂದ ಬಹಳ ದೂರ ಓಡಿ ಹೋಗುತ್ತಾ ಇದ್ದೇವೆ ಅನ್ಸುತ್ತೆ. ನಿಮ್ಮ ಗೆಳತಿಗೆ "depression " ಖಂಡಿತ ಆಗಿಲ್ಲ.. she has her "desires unsatisfied". ಮತ್ತೆ ಆ ಬಯಕೆಗಳು sexual ಅಂತ ನಾ ಹೇಳ್ತಾ ಇಲ್ಲ. they may be desires like spending time at a good location talking, laughing, kidding, and so on, going to movies including romantic ones, and importantly "sharing responsibilities ", etc...

    ReplyDelete
  34. cont'd..
    ಈ ಎಲ್ಲ desires ಅಥವಾ ಬಯಕೆಗಳನ್ನು ತೀರಿಸಲು ಈ ಸಂದರ್ಭದಲ್ಲಿ ಸಾಧ್ಯವಿಲ್ಲ.. ಆದರೆ ಆಕೆಯ ಭಾವನೆಗಳನ್ನು ಹಂಚಿಕೊಳ್ಳಲು ಕೆಲ ಮಾರ್ಗಗಳನ್ನು ನೀವು ಅವರಿಗೆ ಕಂಡು ಕೊಡಬಹುದು. ಅವು ಏನೆಂದರೆ, ಮೊದಲನೆಯದಾಗಿ ಆಕೆಗೆ regular ಆಗಿ ಸಿಕ್ಕು ತನ್ನ ಮನಸ್ಸಿನೊಳಗೆ ಕುದಿಯುತ್ತಿರುವ ಭಾವನೆಗಳನ್ನ ಹೊರ ಚೆಲ್ಲಲು ಹಾಗು ಹಂಚಿಕೊಳ್ಳಲು ಅವಕಾಶ ಮಾಡಿ ಕೊಡುವಂಥಹ ಒಂದು ಗೆಳತಿ ಬೇಕಾಗಿರುತ್ತಾಳೆ. ಪ್ರತಿನಿತ್ಯ ಅಲ್ದೆ ಹೋದ್ರೂ ವಾರಕ್ಕೊಮ್ಮೆ ಬೇಟಿ ಆಗುವ ಹಾಗೆ ಇರಬೇಕು.. ನೀವಾದ್ರೆ ಬೆಂಗಳೂರಿನಲ್ಲಿ ಇರುವಿರಿ.. ಫೋನಿನಲ್ಲಿ ಮಾತನಾಡಿದರೆ, ಪ್ರತ್ಯಕ್ಷವಾಗಿರುವ ಹಾಗೆ ಭಾಸವಾಗುವುದಿಲ್ಲ.. ಯಾಕೆಂದರೆ ಮುಖಾ ಮುಖಿ ಬೇಟಿಯಾದಾಗ ಮನುಷ್ಯನ ದೇಹದಿಂದ "pheromones " ಅನ್ನೋ chemical
    ಕಣಗಳು ಹೊರ ಚಿಮ್ಮುತ್ತವೆ ಹಾಗು ಅದನ್ನು ಮತ್ತೊಬ್ಬ ವ್ಯಕ್ತಿ ಸ್ವೀಕರಿಸಿದಾಗ "socialness factor" develop ಆಗುತ್ತೆ.. ಜನರು ತಿಳಿದಿರುವ ಹಾಗೆ ಇದು sexual -mate ಆಯ್ಕೆ ಮಾಡಲು ಮಾತ್ರ ಸೀಮಿತ ಅನ್ನೋದು ತಪ್ಪು ಕಲ್ಪನೆ. ಅದಕ್ಕೇ ಅಲ್ಲವೇ ನಾವು ನಮ್ಮ chemistry ಗೆ match ಆಗುವಂಥಹ ಗೆಳೆಯರ ಜೊತೆ ಸಮಯ ಕಳೆಯಲು ಇಚ್ಛೆ ಪಡ್ತೇವೆ? ಸದ್ಯ ನಿಮ್ಮ ಗೆಳತಿಯ ಸ್ಥಿತಿಯನ್ನ ಅಳಿಸಿ ಹಾಕಲು ಆಕೆಯ chemistry ಗೆ ಹೊಂದುವಂಥ ಒಂದು ಗೆಳತಿಯನ್ನ ಹುಡುಕಿ ಕೊಡಿ. ಗೆಳೆಯ ಆದ್ರೂ ಆಗಬಹುದಿತ್ತು. cont'd..

    ReplyDelete
  35. ..cont'd
    ಆದರೆ, ನಮ್ಮ conservative ಆಗಿರುವ ಸಮಾಜದಲ್ಲಿ ಅದು ಅಷ್ಟು ಸರಿ ಅನ್ಸೋಲ್ಲ. ಎರಡನೆಯದಾಗಿ, ಆಕೆಯ ಮನೆಯಲ್ಲಿ ಇಂಟರ್ನೆಟ್ ಕನೆಕ್ಷನ್ ಹಾಕಿಸಿಕೊಳ್ಳಲು ಒತ್ತಾಯ ಮಾಡಿ. ಬ್ಲಾಗಿಂಗ್ ಜಗತ್ತಿಗೆ ಅವರನ್ನೂ ಸಹ ಪರಿಚಯಿಸಿ. ಅವರು ಕೂಡ ಸಹಸ್ರಾರು ಜನರೊಡನೆ ತಮ್ಮ ಭಾವನೆ ಹಾಗು ಅನಿಸಿಕೆಗಳನ್ನ "dissipate and share" ಮಾಡಲಿ. ನಿಮಗೆ ನಾ ಬರೆದಿರುವ ಒಂದು ಸೆಣ್ಣ comment ನಿಂದ ಎಷ್ಟೊಂದು ಖುಷಿ ಹಾಗು josh ಸಿಕ್ಕಿತು ಅಂತ ಹೇಳಿದಿರಲ್ಲವೇ? ಹಾಗೆಯೇ ನಿಮ್ಮ ಗೆಳತಿಯಲ್ಲಿಯೂ ಕೂಡ ಹೊಸ ಹೊಸ ಉತ್ಸಾಹದ ಮೊಳಕೆಯೊಡೆದು, ಸುಂದರ ಭಾವನೆಗಳನ್ನ ಹಂಚಿಕೊಳ್ಳಲು ಹೊಸ ಮಾರ್ಗ ಸೃಷ್ಟಿಯಾಗಬಹುದೆಂದು ನನ್ನ ಊಹೆ..

    ನಾ ಇಷ್ಟು ಹೇಳಿದ್ದನ್ನ ಇನ್ನೂ ಘಾಡವಾಗಿ ವಿಮರ್ಶಿಸಿ ನೋಡಿ. ಪರಿಹಾರ ನಿಮ್ಮೆದುರೇ ಪ್ರತಿಬಿಂಬಿಸುತ್ತದೆ! ನಿಮ್ಮ ಗೆಳತಿಯ ಬಾಳು ಹಸನಾಗಲಿ ಎಂದು ಹಾರೈಸುತ್ತೇನೆ.

    ಮನದಿಂಚರ

    ReplyDelete
  36. ಓ ಮನಸೇ, ನೀನೇಕೆ ಹೀಗೆ...? ಅವರೇ ನಿಮ್ಮ ಹೆಸರು ಗೊತ್ತಾಗಲಿಲ್ಲ . ಪರವಾಗಿಲ್ಲ ಬಿಡಿ , ಹೆಸರಲ್ಲಿ ಏನಿದೆ . ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು . ನಿಮ್ಮ ಸೆಳೆತ ಕಥೆ ಓದಿದೆ . ಅಬ್ಬಾ ನನ್ನ ಗೆಳತಿಯ ಜೀವನಕ್ಕೆ ಎಷ್ಟು ಹತ್ತಿರದ ಲೇಖನ ಅದು . ಕೊನೆಯಲ್ಲಿ ನಾಯಕಿ ತೊಗೊಂಡಿರುವ ನಿರ್ಧಾರ ಸರಿ ಅನ್ನಿಸಿತು . ಮತ್ತೆ ಹೀಗೆ ಬರ್ತಾ ಇರಿ

    ಮನಸಾರೆ

    ReplyDelete
  37. ಮನದಿಂಚರ ಅವರೇ ,
    ನಿಮ್ಮ ಕಾಮೆಂಟ್ಸ್ ಗಳಿಗೆ ಹಾಗೂ ಅದಕ್ಕೆ ಕೊಟ್ಟ ನಿಮ್ಮ ಸಮಯ , ವಿಚಾರಗಳಿಗೆ ಹೃತ್ಪೂರ್ವಕ್ ಕೃತಜ್ಞತೆಗಳು . ನಿಜ ಹೇಳಲಾ ಅವಳ ಪರಿಸ್ಥಿತಿ ನಂಗೆ ಇನ್ನಸ್ಟು ಅರ್ಥ ಮಾಡಿಸಿದಿರಿ . ಅಬ್ಬಾ ! ಪುಸ್ತಕ ಹುಳು ಸೋಡಾ ಗ್ಲಾಸಿನ ದಾಸಯ್ಯ ನ ಜೊತೆ ನನ್ನ ಮದುವೆ ಆಗಿದ್ದರೆ ಅಂತ ಒಂದು ಕ್ಷಣ ಯೋಚಿಸಿದರೆ ನಿಜವಾಗಲು ಮೈ ಜುಮ್ ಅನ್ನಿಸಿತು , ಅದರ ಜೊತೆ ಆ ಪರಿಸ್ಥಿತಿ ನೆನಪಿಸಿ ಕೊಂಡು ಸ್ವಲ್ಪ ನಗುನು ಬಂತು . ನಾನೇನು ಮಾಡ್ತಾ ಇದ್ದೆ ಅನ್ನೋದಕ್ಕೆ ಉತ್ತರ ಸಿಗಲಿಲ್ಲ .
    ನೀವು ಹೇಳಿರೋದು ನೂರಕ್ಕೆ ನೂರು ಸತ್ಯ . ನನ್ನಿಂದ ಅವಳಿಗೆ ಬರಿ ಸಾಂತ್ವನ , ಸಲಹೆ ಮತ್ತೆ ಹಾರೈಕೆ ಸಿಗಬಹುದು ಆದ್ರೆ ಆವಳು ಮಿಸ್ ಮಾಡಿಕೊಂಡಿರೋದು , ಹಾಗೂ ಮಾಡಿಕೊಳ್ಳುತಿರೋದು ಕೊಡಲಿಕ್ಕೆ ಆಗೋಲ್ಲ . ಅದು ನಂಗೆ ಸಂಪೂರ್ಣ ಅರ್ಥ ಆಗಿದೆ . ಆದ್ರೆ ನಾನೇನು ಮಾಡ್ಲಿಕ್ಕೆ ಸಾದ್ಯನ ಅದನ್ನಾದರೂ ಮಾಡೋಣ ಅಂತ .
    ಇನ್ನು ಗಂಡನ ಹೆಂಡತಿಯ ನಡುವೆ ಇರಬೇಕಾಗದ ರಸಿಕತೆ , chemistry , ಲವ್ ಇಲ್ಲವಾದರೆ ಆ ಜೀವನ ಪರ್ಯಂತ ನರಕ ಅಂತು ಖಂಡಿತ . ಗಂಡ ಹೆಂಡತಿ ಯಾಕೆ , chemistry ಇಲ್ಲ ಅಂದ್ರೆ ಒಂದು ಒಳ್ಳೆ ಗೆಳೆತನವೆ ಸಾದ್ಯ ಇಲ್ಲ . ಗೆಳಯರ/ಗೆಳತಿಯರ ನಡುವೆನು ಒಂದು chemistry ಬೇಕಾಗುತ್ತೆ ಆವಾಗಲೇ ಒಂದು comfort ಲೆವೆಲ್ ಸೆಟ್ ಆಗುತ್ತೆ . ನಿಜ ಇದೆಲ್ಲ ಇರದೇ ಬಾಳೋದು ಕಷ್ಟ ಕರ . ಇದರಲ್ಲಿ ಅವಳು ಎಷ್ಟು ಅಸಹಾಯಕಳೋ , ನಾನು ಅಸ್ಟೆ. ಈಗ ಇವೆಲ್ಲ ಅವಳಿಗೆ ಹೇಗೆ ಕೊಡಲು ಸಾದ್ಯ ?
    ಇನ್ನು ನೀವು ಕೊಟ್ಟಿರುವ ಸಲಹೆಗಳು ತುಂಬಾ ಸೂಕ್ತ , ಆದ್ರೆ ಸ್ವಲ್ಪ ಕಷ್ಟ . ನಾನಿರೋದು ಬೆಂಗಳೂರಿನಲ್ಲಿ , ಅವಳಿರೋದು ಹುಬ್ಬಳಿಯಲ್ಲಿ , ಅವಳನ್ನ ಇನ್ person ಆಗಿ ಭೆಟ್ಟಿ ಆಗಬೇಕೆಂದರೆ ೧೨ ಗಂಟೆಗಳ ಪ್ರಯಾಣ ಮಾಡ್ಬೇಕು .
    ವಾರಕೊಮ್ಮೆ ಅಲ್ಲ ತಿಂಗಳಿಗೊಮ್ಮೆನು ಸಾಧ್ಯ ಇಲ್ಲ . ನಂಗೆ ನನ್ನದೆ ಆದ ಜವಾಬ್ದಾರಿಗಳಿವೆ , ನನ್ನ ಮಗನ ಸ್ಕೂಲ್ , ನನ್ನ ಆಫೀಸ್ ಇತ್ಯಾದಿ . ಅವಳು ಅಲ್ಲೇ ಯಾರದ್ರುನು ಗೆಳತಿ ಮಾಡಿ ಕೊಳ್ಳಲಿಕ್ಕೆ ಸಾಧ್ಯನಾ ? ಇತ್ತೀಚಿಗೆ ಪರಿಚಯವಾದ ಗೆಳತಿಗೆ ಇಂತ ಸೂಕ್ಷ್ಮ ವಿಷಯಗಳನ್ನು ಹೇಳೋ ಧೈರ್ಯಾನು ಬರೋಲ್ಲ ಅಲ್ವಾ . ಇನ್ನು ಬ್ಲಾಗಿಂಗ್ ಹಾಗೂ ಬ್ಲಾಗ್ ಫ್ರೆನ್ಸ್ ಒಂದು ಒಳ್ಳೆ ಯೋಚನೆ . ಇಲ್ಲಿ ನಮ್ಮ ಮನಸಿನ ಭಾವನೆಗಳನ್ನ ಮುಕ್ತವಾಗಿ ವ್ಯಕ್ತ ಪಡಿಸಬಹುದು , ಅದರಂತೆ ನಿಮ್ಮ ಅಂತ ಒಳ್ಳೆ ಬ್ಲಾಗ್ ಫ್ರೆನ್ಸ್ ಮಾಡಿಕೊಳ್ಳಬಹುದು . ನೀವು ಹೇಳಿದ ಹಾಗೆ ನನ್ನ ಗೆಳತಿಗೆ ಕೂಡ ಹೊಸ ಹೊಸ ಉತ್ಸಾಹದ ಮೊಳಕೆಯೊಡೆದು, ಸುಂದರ ಭಾವನೆಗಳನ್ನ ಹಂಚಿಕೊಳ್ಳಲು ಹೊಸ ಮಾರ್ಗ ಸೃಷ್ಟಿಯಾಗಬಹುದು . ಆದ್ರೆ ಇದು ಕಷ್ಟ ನೆ . ನಾನು ಹೇಳಿರೋ ಹಾಗೆ ಅವಳಿಗೆ ಮನೇಲಿ ಒಂದು ಕಂಪ್ಯೂಟರ್ ತೊಂಗೊಂಡು, ಅದಕ್ಕೆ ನೆಟ್ ಹಾಕಿಸಿ ,ಬ್ಲಾಗಿಂಗ್ ಚಾಟಿಂಗ್ ಮಾಡೋವಸ್ತು ಸ್ವಾತಂತ್ರ್ಯನು ಇಲ್ಲ , ಅವಳಿಗೆ ಕಂಪ್ಯೂಟರ್ ಬಗ್ಗೆ ಮಾಹಿತಿನು ಇಲ್ಲ . ಅವಳು ಓದಿರೋದು ಪಿ . ಯು .ಸಿ 1st ಇಯರ್ ಮಾತ್ರ . ಆಮೇಲೆ ಪ್ರತಿ ತಿಂಗಳು ಇಂಟರ್ನೆಟ್ ಬಿಲ್ ಬಂದ್ರೆ ಅದನ್ನು ಕೊಡುವ ಒಬ್ಬ ಜವಾಬ್ದಾರಿ ಹಾಗೂ ಹೆಂಡತಿಯ ಭಾವನೆಗಳಿಗೆ ಸ್ಪಂದಿಸುವ ಗಂಡನು ಇಲ್ಲ . ಅವಳು ಪ್ರತಿಯೊಂದಕ್ಕೂ ಅವರ ಅತ್ತೇನೆ ಕೇಳಬೇಕು . ಆರ್ಥಿಕ ಸ್ವಾತಂತ್ರ್ಯ ಅವಳಿಗೆ ಇಲ್ಲ . ನಿಜಕ್ಕೂ ನಿಮ್ಮ ಸೂಕ್ತ ಸಲಹೆಗಳನ್ನ ನಡೆಸಿ ಕೊಡಲಿಕ್ಕೆ ಸಾದ್ಯ ಇಲ್ಲ ಅನ್ನೋದು ತುಂಬಾ ಖೇದದ ವಿಷಯ .

    ಮನಸಾರೆ

    ReplyDelete
  38. ಹಾಯ್ ಮನಸಾರೆಅವರೆ,
    ಬಹಳ ದಿನಗಳಿಂದ ನಿಮ್ಮ ಬ್ಲಾಗ್ ಅಪ್ಡೇಟ್ ಆಗ್ಲೇ ಇಲ್ಲ.. ತುಮ್ಬನೆ ಬ್ಯುಸಿ ಅಂತ ಕಾಣುತ್ತೆ..
    ನಿಮ್ಮ ಗೆಳತಿ ಹೇಗಿದ್ದಾರೆ ಈಗ ಎಂಬುದನ್ನ ತಿಳಿಸಿ..

    ReplyDelete
  39. ರಪೀಕನದು ನಿಜವಾದ ಪ್ರೀತಿ ಪ್ರೇಮ ಅಲ್ಲ ಸಂದರ್ಭಕ್ಕೆ ತಕ್ಕಂತೆ ಬದಲಾಗುವನು ಅವನು ಮದುವೆಯಾದ ಇವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂಬ ಯಾವುದಾದರೂ ನಂಬಿಕೆ ಇದೆ ? ತನ್ನ ಕಾಮದಾಹ ಯೌವನದದಾಹ ತೀರಿಕೊಂಡ ಅಶಳಿಗೆ ಅವನು ಕೈ ಕೊಟ್ಟುರೆ ಅವಳ ಬದುಕು ಬಿರುಗಾಳಿ ಸಿಕ್ಕ ಗಾಳಿ ಪಟ..ಅದಕ್ಕಾಗಿಯೋ... ಹಿರಿಯರು ಹೇಳುತ್ತಾರೆ "ಪಾಲಿಗೆ ಬಂದಿದ್ದು ಪಂಚಾಮೃತ"... ಬರವಣಿಗೆ ಸೂಪರ್ ಸೂಪರ್ ಸೂಪರ್

    ReplyDelete
  40. ಸೂಪರ್ ಸೂಪರ್ ಬರವಣಿಗೆ ನಿಮ್ಮದು ಅದ್ದುತವಾದ ಪ್ರೇಮ ಕವನ ಬರವಣಿಗೆಯ ವಿಷಯ ಒಳ್ಳೆಯ ಕನ್ನಡ ಸಾಹಿತ್ಯ ತೇರು ಎಳೆಯುವ ಸುಂದರ ಕವಿಗಳಲ್ಲಿ ನಿವು ಒಬ್ಬರು...

    ReplyDelete